ಜೇವರ್ಗಿ: ಅತಿವೃಷ್ಟಿ ಹಾಗೂ ಭೀಮಾ ನದಿಯ ಪ್ರವಾಹದಿಂದ ತಾಲ್ಲೂಕಿನ ರೈತರು ಸಂಕಷ್ಟಕ್ಕೀಡಾಗಿದ್ದು, ಪರಿಹಾರಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪ್ರತಿ ವರ್ಷ ತಾಲ್ಲೂಕಿನ ರೈತರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು, ಪ್ರಸಕ್ತ ವರ್ಷದ ಮಳೆ ಹಾಗೂ ಪ್ರವಾಹ ಅನ್ನದಾತನ ಬದುಕು ಅಕ್ಷರಶಃ ದುರ್ಬಲಗೊಳಿಸಿದೆ. ಸತತ ಬರಗಾಲದಿಂದ ಈ ಮೊದಲು ತೊಂದರೆ ಅನುಭವಿಸಿದ ರೈತರಿಗೆ ಅತಿವೃಷ್ಟಿ ಹಾಗೂ ನೆರೆ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಹಾರಾಷ್ಟ್ರ ರಾಜ್ಯದ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದಿದ್ದು ಭೀಮಾ ನದಿ ತುಂಬಿ ಹರಿದು ನದಿ ತೀರದ ಜಮೀನುಗಳು ಜಲಾವೃತಗೊಂಡಗೊಂಡು ಬೆಳೆ ಹಾನಿಯಾಗಿದೆ. ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬೆಳೆದಿದ್ದ ಹೆಸರು ಬೆಳೆ ಮಳೆ ಹಾಗೂ ನೆರೆ ಹಾವಳಿಗೆ ನೀರು ಪಾಲಾಗಿದೆ. ರೈತರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ.
ತಾಲೂಕಿನಾದ್ಯಂತ ಮಳೆಯಿಂದ ರೈತರು ಕಷ್ಟಪಟ್ಟು ಬೆಳೆದಿದ್ದ ತೊಗರಿ, ಹತ್ತಿ, ಮೆಕ್ಕೆಜೋಳ, ಹೆಸರು, ಉದ್ದು ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿವೆ. ಕೃಷಿ ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ ಒಟ್ಟು 1.80 ಲಕ್ಷ ಹೆಕ್ಟೇರ್ ಮುಂಗಾರು ಹಂಗಾಮು ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 83,460 ಸಾವಿರ ಹೆಕ್ಟೇರ್ತೊಗರಿ, 69,959 ಸಾವಿರ ಹೆಕ್ಟೇರ್ ಹತ್ತಿ, ಸಾವಿರ ಹೆಕ್ಟೇರ್ಮೆಕ್ಕೆಜೋಳ, 800 ಹೆಕ್ಟೇರ್ ಕಬ್ಬು, 1250 ಹೆಕ್ಟೇರ್ ಹೆಸರು ಸೇರಿ ವಿವಿಧ ಬೆಳೆ ಬಿತ್ತನೆ ಮಾಡಲಾಗಿದೆ. ಆದರೆ, ಸಾಕಷ್ಟು ಪ್ರಮಾಣದಲ್ಲಿ ತೊಗರಿ ಬೆಳೆ ಹಳದಿ, ಹಾಗೂ ಹತ್ತಿ ಕಪ್ಪು ಬಣ್ಣಕ್ಕೆ ತಿರುಗಿ ಹಾನಿಯಾಗಿದೆ. ರೈತರೆ ಹೇಳಿದಂತೆ ಸುಮಾರು 40 ರಿಂದ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾಳಾಗಿವೆ.
ಚೆನ್ನಾಗಿ ಬೆಳೆದು ನಿಂತಿದ್ದ ಹೆಸರು, ಮೆಕ್ಕೆಜೋಳ ಬೆಳೆ ನಿರಂತರ ಮಳೆಗೆ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಕೋನಾಹಿಪ್ಪರಗಾ ಗ್ರಾಮದ ರೈತ ಅರುಣ ಗೌಡ ಮತ್ತು ಸರ್ಕಾರ ಅತಿವೃಷ್ಟಿಯಿಂದ ಉಂಟಾದ ಹಾನಿ ಕುರಿತು ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ಬಣಮಿಗಿ ಗ್ರಾಮದ ರೈತ ನಾನಾಗೌಡ ಪಾಟೀಲ ಒತ್ತಾಯಿಸಿದ್ದಾರೆ.
ಪ್ರವಾಹ ಮತ್ತು ಮಳೆಯಿಂದ ಹಾನಿಯಾದ ಬೆಳೆಗಳ ಜಂಟಿ ಸಮೀಕ್ಷೆ ನಡೆಸಿ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ನಿರ್ದೇಶಕ ಜೇವರ್ಗಿ
ಸರ್ಕಾರ ಕೂಡಲೇ ಅತಿವೃಷ್ಟಿ ಹಾಗೂ ಪ್ರವಾಹದಿಂದ ನೊಂದಿರುವ ತಾಲೂಕಿನ ರೈತರಿಗೆ ಸೂಕ್ತ ಪರಿಹಾರ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು.ಮಂಜುಳಾ ಭಜಂತ್ರಿ, ರೈತ ಸಂಘ-ಹಸಿರು ಸೇನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.