ಕಲಬುರಗಿ: ನಗರದಲ್ಲಿ ಭಾನುವಾರ ನಡೆದ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಸಮ್ಮೇಳನದಲ್ಲಿ ಪಕ್ಷದ ಹಿರಿಯ ಸದಸ್ಯೆ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಅವರನ್ನು ಜಿಲ್ಲಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿ ಸದಸ್ಯರಾಗಿ ಶರಣಬಸಪ್ಪ ಮಮಶೆಟ್ಟಿ, ಶಾಂತಾ ಘಂಟೆ, ಗೌರಮ್ಮ ಪಾಟೀಲ, ಭೀಮಶೆಟ್ಟಿ ಯಂಪಳ್ಳಿ, ಶ್ರೀಮಂತ ಬಿರಾದಾರ, ಪಾಂಡುರಂಗ ಮಾವಿನಕರ್, ಮೇಘರಾಜ ಕಠಾರೆ, ನಾಗಯ್ಯ ಸ್ವಾಮಿ, ಶಿವಶರಣಪ್ಪ ಧನ್ನೂರೆ, ಎಂ.ಬಿ. ಸಜ್ಜನ, ರೇವಣಸಿದ್ದಪ್ಪ ಕಲಬುರಗಿ, ಸುಭಾಷ ಜೇವರ್ಗಿ, ಸುಧಾಮ ಧನ್ನಿ, ಶೇಖಮ್ಮ ಕುರಿ, ಜಾವೇದ್ ಹುಸೇನ್, ಪ್ರದೀಪ ತಿರ್ಲಾಪುರ ಹಾಗೂ ಶಿವಾನಂದ ಕವಲಗಾ ಅವರನ್ನು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಯ್ಕೆ ಮಾಡಲಾಯಿತು.
ನಿರ್ಣಯಗಳು: ಪಕ್ಷದ 23ನೇ ಜಿಲ್ಲಾ ಸಮ್ಮೇಳನದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕೋಮುವಾದ, ಫ್ಯಾಸಿವಾದವನ್ನು ತಡೆಗಟ್ಟಲು ಮತ್ತು ಸಂವಿಧಾನ ಸಂರಕ್ಷಿಸಿ ದೇಶದ ಸೌಹಾರ್ದ ಪರಂಪರೆಯನ್ನು ಉಳಿಸಲು ಪಕ್ಷ ಶ್ರಮಿಸುವುದಾಗಿ ತೀರ್ಮಾನಿಸಿತು. ಜಾನುವಾರು ಹತ್ಯಾ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಲಾಯಿತು. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಲಾಯಿತು. ಅತ್ಯವಶ್ಯಕ ವಸ್ತುಗಳ ಕಾಯ್ದೆಗೆ ತರಲಾದ ತಿದ್ದುಪಡಿಯನ್ನು ರದ್ದುಪಡಿಸಬೇಕು. ದೇವದಾಸಿ ಮಹಿಳೆಯರು ಸಮಗ್ರ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಬೇಕು. ದೇವದಾಸಿ ಮಹಿಳೆಯರಿಗೆ ಉಳುಮೆ ಯೋಗ್ಯ ಐದು ಎಕರೆ ಭೂಮಿಯನ್ನು ವಿತರಿಸಿ ಉದ್ಯೋಗ ಖಾತ್ರಿ ಕಾಯ್ದೆಯಡಿ ಕಾಮಗಾರಿಯಲ್ಲಿ 363 ದಿನಗಳಲ್ಲಿ ಅವಶ್ಯಕತೆಗನುಸರಿಸಿ ಕೇಳಿದಷ್ಟು ಕೆಲಸ ಒದಗಿಸಬೇಕು. ದಲಿತರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಆಗ್ರಹಿಸಲಾಯಿತು.
ಉದ್ಯೋಗ ಖಾತ್ರಿ ಕಾಯ್ದೆಯನ್ನು ನಗರಕ್ಕೂ ವಿಸ್ತರಿಸಿ ಉದ್ಯೋಗ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನತೆಯ ಚಳುವಳಿಯನ್ನು ಬಲಪಡಿಲು ಸಮ್ಮೇಳನವು ತೀರ್ಮಾನ ಮಾಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.