ADVERTISEMENT

ಊಟ, ಹಣ ಬೇಡ, ಸ್ಥಳಾಂತರ ಮಾಡಿ ಸಾಕು: ಕಡಬೂರು ಗ್ರಾಮಸ್ಥರ ಬೇಡಿಕೆ

ಮುನ್ನೆಲೆಗೆ ಬಂದ ಕಡಬೂರು ಗ್ರಾಮಸ್ಥರ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 15:37 IST
Last Updated 19 ಅಕ್ಟೋಬರ್ 2020, 15:37 IST
ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ಕಡಬೂರು ಗ್ರಾಮಸ್ಥರು
ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ ಕಡಬೂರು ಗ್ರಾಮಸ್ಥರು   

ವಾಡಿ: ಭೀಮಾ ನದಿ ದಂಡೆಯ ಕಡಬೂರು ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾದ ಸ್ಥಳಾಂತರದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳಿವೆ. ಈ ಬಾರಿ ಉಕ್ಕಿ ಹರಿದ ಪ್ರವಾಹ ಗ್ರಾಮದ 140ಕ್ಕೂ ಅಧಿಕ ಮನೆಗಳಿಗೆ ತೀವ್ರ ಧಕ್ಕೆ ತಂದಿದೆ. 400ಕ್ಕೂ ಅಧಿಕ ಜನರು ನಿರಾಶ್ರಿಗೊಂಡು ಪರಿಹಾರ ಕೇಂದ್ರದ ಮೊರೆ ಹೋಗಬೇಕಾಯಿತು. ಗ್ರಾಮದ ದಲಿತರ ಬಡಾವಣೆ, ಮಹಿಬೂಬ್ ಸುಭಾನಿ ದರ್ಗಾ ಏರಿಯಾದ ಬಹುತೇಕ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾಗಿವೆ.

‘ಪ್ರತಿ ಸಲ ಪ್ರವಾಹ ನಮ್ಮ ಬದುಕನ್ನು ಮುಕ್ಕುತ್ತಿದೆ. ಭಯ, ಆತಂಕದ ಮಧ್ಯೆ ಜೀವನ ನಡೆಸುವಂತಾಗಿದೆ. ನಾವು ಹೇಗೋ ಬದುಕಿದೆವು, ಈ ಕಷ್ಟ ನಮ್ಮ ಮಕ್ಕಳಿಗೆ ಬೇಡ, ನಮಗೆ ಸರ್ಕಾರ ನೀಡುವ ಊಟ ತಿಂಡಿ ಬೇಡ, ಪರಿಹಾರದ ಆಸೆಯೂ ನಮಗಿಲ್ಲ, ಹೊರಗಡೆ ಜಾಗದಲ್ಲಿ ಮನೆ ಕಟ್ಟಿಕೊಟ್ಟರೆ ನೆಮ್ಮದಿಯಾಗಿ ಬದುಕು ನಡೆಸ್ತೀವಿ' ಎಂದು ‘ಪ್ರಜಾವಾಣಿ’ಯೆದುರು ಶರಣಮ್ಮ, ಅನಸಾದೇವಿ, ರಿಯಾನ ಬೇಗಂ, ಆಬೇದ ಬೇಗಂ, ಸೋಮಯ್ಯಾ ಸ್ವಾಮಿ ಅಳಲು ತೋಡಿಕೊಂಡರು.

ADVERTISEMENT

‘ದಲಿತರ ಬಡಾವಣೆಯ ಹಲವು ಮನೆಗಳು ನೀರಲ್ಲಿ ಸಿಲುಕಿದ್ದು ಬದುಕು ಅತಂತ್ರವಾಗಿದೆ. ಈ ಹಿಂದೆ ನೆರೆ ಸಂತ್ರಸ್ತರಿಗೆ ಮಂಜೂರಾಗಿದ್ದ ಮನೆಗಳು ಉಳ್ಳವರ ಪಾಲಾಗಿವೆ. ಸಂಕಷ್ಟದಲ್ಲಿರುವ ನಮಗೆ ಆಶ್ರಯ ಕಲ್ಪಿಸಿ' ಎಂದು ಮಹಾದೇವಿ, ಭಾಗಮ್ಮ ಒತ್ತಾಯಿಸಿದರು.

2008ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರವಲಯದಲ್ಲಿ 60 ಮನೆಗಳನ್ನು ಕಟ್ಟಿಸಿಕೊಟ್ಟು ಸ್ಥಳಾಂತರಕ್ಕೆ ಮುನ್ನುಡಿ ಬರೆಯಿತು. ಈಚೆಗೆ ಗ್ರಾಮಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಗ್ರಾಮಸ್ಥರು ಸ್ಥಳಾಂತರ ಮಾಡುವ ಕುರಿತು ಒಕ್ಕೂರಲಿನ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.