ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿನ ಕಲ್ಯಾಣ ಮಂಟಪ
ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಯನ್ನು ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಕಲಬುರಗಿ ಬಂದ್ನಿಂದಾಗಿ ಮದುವೆ ಕಾರ್ಯಕ್ರಮಕ್ಕೆ ಅಡಚಣೆಯಾಯಿತು.
ಹುಮನಾಬಾದ್ ರಸ್ತೆಯ ಬೇಲೂರ ಕ್ರಾಸ್ ಸಮೀಪದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕಪನೂರಿನ ಹಂಗರಗಿ ಪರಿವಾರ ಹಾಗೂ ಹಾಗರಗಿಯ ಹಿಪ್ಪರಗಿ ಪರಿವಾರದ ವಧು-ವರ ವಿವಾಹ ಆಯೋಜನೆಯಾಗಿದೆ. ಕಪನೂರ ಗ್ರಾಮದ ನೆಂಟರು ಕಲ್ಯಾಣ ಮಂಟಪ ತಲುಪಿದ್ದರು. ಆದರೆ, ಹಾಗರಗಿಯ ಹಿಪ್ಪರಗಿ ನೆಂಟರು ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡಿದ್ದು, ವಿವಾಹ ಕಾರ್ಯಕ್ರಮಕ್ಕೆ ಅಡ್ಡಿಯಾಗಿದೆ ಎಂದು ಕಲ್ಯಾಣ ಮಂಟಪದಲ್ಲಿನ ನೆಂಟರೊಬ್ಬರು ಹೇಳಿದ್ದಾರೆ.
ಮದುವೆ ಶುಭಕಾರ್ಯಕ್ಕೆ ಎಲ್ಲ ಸಿದ್ಧ ಮಾಡಿಕೊಂಡು ಅಣಿಯಾಗಿದ್ದೆವು. ಪ್ರತಿಭಟನೆಯಿಂದಾಗಿ ಒಂದು ಕಡೆಯ ಬೀಗರು ಬಾರದಕ್ಕೆ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಕಲ್ಯಾಣ ಮಂಟಪದ ಎದುರಿನಲ್ಲಿ ಜಮಾಯಿಸಿ ರಸ್ತೆ ತಡೆ ನಡೆಸುತ್ತಿದ್ದಾರೆ. ನಗರದ ರಿಂಗ್ ರಸ್ತೆಯ ಪ್ರಮುಖ ವೃತ್ತಗಳಲ್ಲೂ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.