ಕಲಬುರಗಿ: ‘ತೊಗರಿ ಬೆಳೆ ನೆಟೆ ರೋಗ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮತ್ತು ಕೃಷಿ ಸಾಲ ಮನ್ನಾಕ್ಕೆ ಆಗ್ರಹಿಸಿ ರೈತಪರ, ಕನ್ನಡಪರ ಮತ್ತು ದಲಿತಪರ ಸಂಘಟನೆಗಳು ಜನವರಿ 17ರಂದು ಕರೆ ನೀಡಿರುವ ಕಲಬುರಗಿ ಬಂದ್ ಯಶಸ್ವಿಗೆ ಸಹಕಾರ ನೀಡಿ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಕೋರಿದರು.
‘ಅಂದು ನಸುಕಿನ 5ಕ್ಕೆ ಕೇಂದ್ರ ಬಸ್ ನಿಲ್ದಾಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಆರಂಬಿಸಲಾಗುವುದು. ಅಲ್ಲಿಂದ ಸೂಪರ್ ಮಾರ್ಕೆಟ್ವರೆಗೆ ಮೆರವಣಿಗೆ ನಡೆಸಿ, ನಂತರ ಬಳಿಕೆ ಸಭೆ ನಡೆಸಲಾಗುವುದು’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
‘ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ರಾಜ್ಯ ರೈತ ಸಂಘ(ಹಸಿರು ಸೇನೆ), ಜನವಾದಿ ಮಹಿಳಾ ಸಂಘಟನೆ, ನವಕರ್ನಾಟಕ ಸ್ವಾಭಿಮಾನ ವೇದಿಕೆ, ವೀರಕನ್ನಡಿಗರ ಸೈನ್ಯ, ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘ, ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು), ಅಖಿಲ ಭಾರತ ಕಿಸಾನ್ ಸಭಾ ಸೇರಿ ಹಲವು ಸಂಘಟನೆಗಳ ಮುಖಂಡರು ಸಭೆ ನಡೆಸಿ ಬಂದ್ ರೂಪುರೇಷೆ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.
‘ವ್ಯಾಪಾರಿಗಳು, ಆಟೊ ಚಾಲಕರು ಮತ್ತು ಬಸ್ ಘಟಕದ ವ್ಯವಸ್ಥಾಪಕರಿಗೆ ಬಂದ್ಗೆ ಸಹಕರಿಸುವಂತೆ ಕೋರಲಾಗಿದೆ. ವಿವಿಧ ಸಂಘ–ಸಂಸ್ಥೆಗಳು ಬೆಂಬಲ ನೀಡುತ್ತಿವೆ’ ಎಂದರು.
ಎಐಎಡಬ್ಲ್ಯುಯು ಜಿಲ್ಲಾ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಎಐಯುಇಸಿ ಕಾರ್ಯಾಧ್ಯಕ್ಷ ಎಂ.ಬಿ.ಸಜ್ಜನ್, ಸಾಯಬಣ್ಣ ಗುಡುಬಾ, ಪದ್ಮಿನಿ ಕಿರಣಗಿ, ಸಿದ್ದಣ್ಣ ಕಲಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.