ಕಲಬುರಗಿ: ಜಿಲ್ಲೆಯಿಂದ ಜಮ್ಮು ಕಾಶ್ಮೀರದ ಅಮರನಾಥ ಯಾತ್ರೆಗೆ ತೆರಳಿದ್ದ 11 ಜನರ ತಂಡವು ಸುರಕ್ಷಿತವಾಗಿದ್ದು, 15ರಂದು ಜಮ್ಮುವಿನಿಂದ ಜಿಲ್ಲೆಗೆ ವಾಪಸಾಗಲಿದೆ.
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ವೈಭವ ಹೇರೂರ, ಗುರು ಕುಲಕರ್ಣಿ, ಅವಿನಾಶ ಅಪ್ಪಾರಾವ ಪಂಡಿತ, ರಘುವೀರ ಕುಲಕರ್ಣಿ, ಸುದೀಪ ಕುಲಕರ್ಣಿ, ಸ್ವರೂಪ ಪೂಜಾರಿ, ಸುಶಾಂತ ದೇಶಮುಖ, ಗೋವರ್ಧನ ಜೋಶಿ, ಅಭಿಷೇಕ ಜೋಶಿ, ಕಲಬುರಗಿಯ ವೈಜನಾಥ ರಟಕಲ್, ಪ್ರವೀಣ ಬಾಳಿ ಅವರಿದ್ದ ತಂಡವು ಶುಕ್ರವಾರ ಅಮರನಾಥ ತಲುಪಿ ಅಲ್ಲಿ ಶಿವಲಿಂಗದ ದರ್ಶನ ಪಡೆದಿತ್ತು.
‘ಅಮರನಾಥದಿಂದ ಹಿಂದಿರುವಾಗ ಎರಡು ಕಿ.ಮೀ. ಅಂತರದಲ್ಲಿ ಮೇಘಸ್ಫೋಟ ಸಂಭವಿಸಿ, ನೀರು ಹೊಳೆಯಂತೆ ಹರಿದು ಬರುತ್ತಿತ್ತು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಸಿಆರ್ಪಿಎಫ್ ಯೋಧರು ನಮ್ಮ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದರು. ಸದ್ಯಕ್ಕೆ ಕಾಶ್ಮೀರದ ಬಳಿಯ ಸೇನೆಯ ಬಾಲಚಲ್ ಸೇನಾ ಶಿಬಿರದ ಡೇರೆಗಳಲ್ಲಿ ತಂಗಿದ್ದೇವು. 15ಕ್ಕೆ ನಮ್ಮ ರೈಲು ಇಲ್ಲಿಂದ ಹೊರಡಲಿದೆ. ಸದ್ಯಕ್ಕೆ ಸುರಕ್ಷಿತವಾಗಿದ್ದೇವೆ’ ಎಂದು ವೈಭವ ಹೇರೂರ ’ಪ್ರಜಾವಾಣಿ’ಗೆ ತಿಳಿಸಿದರು.
ಬಬಲಾದ ಮಠದ ಗುರುಪಾದಲಿಂಗ ಶ್ರೀಗಳಿದ್ದ 14 ಜನರ ಯಾತ್ರಿಕರ ತಂಡವು ಅಮರನಾಥ ದರ್ಶನ ಪಡೆದು ವೈಷ್ಣೋದೇವಿಯತ್ತ ತೆರಳಿದೆ. ಅವರೂ ಸುರಕ್ಷಿತರಾಗಿದ್ದಾರೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.
ದೇವಲಗಾಣಗಾಪುರದಿಂದ ಅಮರನಾಥ ಯಾತ್ರೆಗೆ ತೆರಳಿದ್ದ 11 ಯಾತ್ರಿಕರ ತಂಡವು ಸುರಕ್ಷಿತವಾಗಿದೆ. ಜಿಲ್ಲಾಡಳಿತವು ಅವರೊಂದಿಗೆ ನಿಕಟ ಸಂಪರ್ಕದಲ್ಲಿದೆ
-ಯಶವಂತ ವಿ. ಗುರುಕರ್,ಕಲಬುರಗಿ ಜಿಲ್ಲಾಧಿಕಾರಿ
ಇವನ್ನೂ ಓದಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.