
ಕಲಬುರಗಿ: ಕಟ್ಟುನಿಟ್ಟಿನ ಬಿಗಿಕ್ರಮಗಳ ಹೊರತಾಗಿಯೂ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮತ್ತೆ ಒಂದು ಸ್ಮಾರ್ಟ್ಫೋನ್, ಎಂಟು ಕೀ ಪ್ಯಾಡ್ ಮೊಬೈಲ್ ಫೋನ್ ಹಾಗೂ ಎರಡು ಸಿಮ್ ಕಾರ್ಡ್ಗಳು ಪತ್ತೆಯಾಗಿವೆ.
ಫೆಬ್ರುವರಿ 26ರಂದು ರಾತ್ರಿ 11ರಿಂದ 12.50ರವರೆಗೆ ಕಾರಾಗೃಹದ ಅಧಿಕಾರಿಗಳು–ಸಿಬ್ಬಂದಿ ನಡೆಸಿದ ದಿಢೀರ್ ತಪಾಸಣೆಯಲ್ಲಿ ಇವೆಲ್ಲವೂ ದೊರೆತಿವೆ. ಜೈಲಿನ 5, 7, 9 ಹಾಗೂ 10ನೇ ಬ್ಯಾರಕ್ಗಳು, ಬಂಧಿಗಳು ಹಾಗೂ ಕಾರಾಗೃಹದ ಒಳಾಂಗಣದ, ಹೊರಾಂಗಣದಲ್ಲಿ ಶೋಧ ನಡೆದಿತ್ತು.
‘ಬ್ಯಾರಕ್ ಸಂಖ್ಯೆ 5ರ ಶೌಚಾಲಯದಲ್ಲಿ 1 ಕೀ ಪ್ಯಾಡ್ ಮೊಬೈಲ್, ಟಿ.ವಿ ಹಿಂಭಾಗದಲ್ಲಿ 1 ಕೀ ಪ್ಯಾಡ್ ಮೊಬೈಲ್ ಫೋನ್ ಸಿಕ್ಕಿವೆ. ಬ್ಯಾರಕ್ ಸಂಖ್ಯೆ 7ರಲ್ಲಿ ಶೌಚಾಲಯದ ಕಿಟಕಿಯಲ್ಲಿ ಒಂದು ಸ್ಮಾರ್ಟ್ಫೋನ್, ಕಮೋಡ್ ಬಳಿ ಎರಡು ಕೀ ಪ್ಯಾಡ್ ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ಬ್ಯಾರಕ್ ಸಂಖ್ಯೆ 9ರಲ್ಲಿ ಟಿವಿ ಇಡುವ ಶೆಲ್ಫ್ ಒಳಗೆ ಎರಡು ಕೀ ಪ್ಯಾಡ್ ಮೊಬೈಲ್ ಸಿಕ್ಕಿವೆ. ಬ್ಯಾರಕ್ ಸಂಖ್ಯೆ 10ರಲ್ಲಿ ಶೌಚಾಲಯದ ಕಸದ ಬುಟ್ಟಿಯಲ್ಲಿ ಎರಡು ಕೀ ಪ್ಯಾಡ್ ಮೊಬೈಲ್ ಹಾಗೂ ಎರಡು ಸಿಮ್ ಕಾರ್ಡ್ಗಳು ಪತ್ತೆಯಾಗಿವೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
‘ಜೈಲಿನಲ್ಲಿ ದೊರೆತ ಫೋನ್ಗಳು ಹಾಗೂ ಸಿಮ್ಗಳು ಯಾರ ಹೆಸರಿನಲ್ಲಿವೆ? ಜೈಲಿನೊಳಗೆ ಯಾರು ಸರಬರಾಜು ಮಾಡಿದರು? ಹೇಗೆ ಸರಬರಾಜು ಮಾಡಿದರು? ಎಂಬುದರ ಬಗೆಗೆ ಕೂಲಂಕಷ ತನಿಖೆ ನಡೆಸಬೇಕು’ ಎಂದು ಜೈಲು ಅಧೀಕ್ಷಕ ರಾಕೇಶ ಕಾಂಬಳೆ ಅವರು ನೀಡಿದ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಅಕ್ರಮ ಮಾರಾಟ: ಇಬ್ಬರ ವಿರುದ್ಧ ಕ್ರಮ
ಕಲಬುರಗಿ: ನಗರದ ಹೊರವಲಯದ ಅಫಜಲಪುರ ರಸ್ತೆಯ ಹಡಗಿಲ್ ಹಾರುತಿ ಸಮೀಪದ ರಾಜಧಾನಿ ಢಾಬಾ ಸಮೀಪ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಫರಹತಾಬಾದ್ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಆರೋಪಿಗಳಿಂದ ಒಟ್ಟು ವಿವಿಧ ಬ್ರ್ಯಾಂಡ್ಗಳ ₹22,570 ಮೌಲ್ಯದ ಮದ್ಯವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ನಗ, ನಾಣ್ಯ ಕಳವು
ಕಲಬುರಗಿ: ನಗರದ ಕಾಂತಾ ಕಾಲೊನಿಯ ನಿವಾಸಿ, ಶಿಕ್ಷಕಿ ಶಶಿಕಲಾ ನರೋಣಕರ ಅವರ ಮನೆಯ ಬೀಗ ಮುರಿದ ಕಳ್ಳರು, 8 ಗ್ರಾಂ ಚಿನ್ನಾಭರಣ, 240 ಗ್ರಾಂ ಬೆಳ್ಳಿ ಆಭರಣ, ₹2.20 ಲಕ್ಷ ನಗದು, ಮೊಬೈಲ್ ಫೋನ್ ಹಾಗೂ ಖಾಲಿ ಚೆಕ್ ಕದ್ದು ಪರಾರಿಯಾಗಿದ್ದಾರೆ.
‘ಒಟ್ಟು ₹2.84 ಲಕ್ಷ ಮೌಲ್ಯದ ವಸ್ತುಗಳು ಕಳುವಾಗಿವೆ’ ಎಂದು ಶಶಿಕಲಾ ಅವರು ನೀಡಿದ ದೂರಿನನ್ವಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರೂವರೆ ವರ್ಷದ ಬಳಿಕ ಕಳ್ಳನ ಬಂಧನ
ಕಲಬುರಗಿ: ನಗರದಲ್ಲಿ ಮನೆಯೊಂದರ ಕೀಲಿ ಮುರಿದು 70 ಗ್ರಾಂ ಚಿನ್ನಾಭರಣ ಕದ್ದು ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳನೊಬ್ಬನನ್ನು ಆರ್.ಜಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಂತರರಾಜ್ಯ ಕಳ್ಳ ಸುರೇಶ ಅಲಿಯಾಸ್ ಗಂಗಾರಾಮ ಚವ್ಹಾಣ (38) ಬಂಧಿತ. ಆತನಿಂದ 45 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಮೂಲತಃ ಮಹಾರಾಷ್ಟ್ರದ ಅಕ್ಕಲಕೋಟೆಯ ಮೈಂದರ್ಗಿಯವನು. ಪುಣೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಸೊಲ್ಲಾಪುರ ಹಾಗೂ ಕಲಬುರಗಿ ಸೇರಿದಂತೆ ಆತನ ವಿರುದ್ಧ ಎಂಟು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಬುರಗಿಯಲ್ಲಿ ಮಹಾಲಕ್ಷ್ಮಿ ಬಡಾವಣೆಯಲ್ಲಿ 2022ರ ಅಕ್ಟೋಬರ್ನಲ್ಲಿ ಶೈಲಜಾ ದೇಚರಾಜು ಎಂಬುವರ ಮನೆಯಲ್ಲಿ 70 ಗ್ರಾಂ ಚಿನ್ನಾಭರಣ ಕಳುವಾದ ಬಗೆಗೆ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ತನಿಖೆ ಇನ್ಸ್ಪೆಕ್ಟರ್ ವಾಜೀದ್ ಪಟೇಲ್ ನೇತೃತ್ವದಲ್ಲಿ ಎಎಸ್ಐ ಮಲ್ಲಿಕಾರ್ಜುನ ಜಾನೆ ಸಿಬ್ಬಂದಿ ಮಲ್ಲನಗೌಡ ಉಮೇಶ ಶರಣಬಸವ ಅರೇಶ ಪ್ರಶಾಂತ ಬಸವರಾಜ ಅವರಿದ್ದ ತಂಡ ರಚಿಸಲಾಗಿತ್ತು. ಈ ತಂಡವು ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.