
ಸಾವು
(ಪ್ರಾತಿನಿಧಿಕ ಚಿತ್ರ)
ಕಲಬುರಗಿ: ಕುಡಿದ ಮತ್ತಿನಲ್ಲಿ ದುಡ್ಡಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನಿಗೆ ಎದೆಗೆ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ನಗರದ ಸೂಪರ್ ಮಾರ್ಕೆಟ್ ಪ್ರದೇಶದ ಜಾಗದಲ್ಲಿ ಶುಕ್ರವಾರ ಸಂಜೆ ಈ ಅವಘಡ ನಡೆದಿದೆ.
ನಗರದ ಗಾಜಿಪುರ ಬಡಾವಣೆ ನಿವಾಸಿ ಶರಣಬಸಪ್ಪ ಗೌಳಿ (35) ಕೊಲೆಯಾದವರು. ಶರಣಬಸಪ್ಪ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಸೂಪರ್ ಮಾರ್ಕೆಟ್ ನರ್ತಕಿ ಬಾರ್ನ ಪಾರ್ಕಿಂಗ್ನಲ್ಲಿ ಯಾರೋ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
‘ಎದೆಗೆ ಚಾಕು ಚುಚ್ಚಿದ್ದರಿಂದ ಶರಣಬಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸಿಪಿ ಶಿವನಗೌಡ ಪಾಟೀಲ, ಬ್ರಹ್ಮಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿವೃತ್ತ ಎಎಸ್ಐ ಮನೆಯಲ್ಲಿ ಕಳವು
ಕಲಬುರಗಿ: ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದ ಪೊಲೀಸ್ ಇಲಾಖೆಯ ನಿವೃತ್ತ ಎಎಸ್ಐ ಅವರ ಮನೆ ಕೀಲಿ ಒಡೆದ ಕಳ್ಳರು 105 ಗ್ರಾಂ ಚಿನ್ನಾಭರಣ, 1,180 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 40 ಸಾವಿರ ನಗದು ಕದ್ದು ಪರಾರಿಯಾಗಿದ್ದಾರೆ.
‘ಮನೆಗೆ ಕೀಲಿ ಹಾಕಿಕೊಂಡು ಫೆಬ್ರುವರಿ 11ರಂದು ಸಂಜೆ ಬೀದರ್ಗೆ ಹೋಗಿದ್ದೆ. ನಿಶ್ಚಿತಾರ್ಥ ಮುಗಿಸಿ ರಾತ್ರಿ ಅಲ್ಲಿಯೇ ತಂಗಿದ್ದೆವು. ಫೆ.12ರಂದು ಬೆಳಿಗ್ಗೆ ನಮ್ಮ ಮನೆಯಲ್ಲಿರುವ ಬಾಡಿಗೆದಾರ ಕರೆ ಮಾಡಿ ಮನೆಯ ಮುಖ್ಯದ್ವಾರ ಅರ್ಧಂಬರ್ಧ ತೆರೆದಿರುವುದಾಗಿ ವಿಷಯ ಮುಟ್ಟಿಸಿದರು. ನಾವು ಬಂದು ನೋಡಿದಾಗ ಮನೆಯ ಬೆಡ್ರೂಮ್ನ ಕಬೋರ್ಡ್ಗಳು ಹಾಗೂ ದೇವರ ಮನೆಯಲ್ಲಿದ್ದ ಚಿನ್ನ–ಬೆಳ್ಳಿ ಆಭರಣಗಳನ್ನು ಕದ್ದಿರುವುದು ಗೊತ್ತಾಗಿದೆ’ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಿವೃತ್ತ ಎಎಸ್ಐ ರಾಜಶೇಖರ ರಟಕಲ್ ತಿಳಿಸಿದ್ದಾರೆ.
ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೈನಾನ್ಸ್ನಿಂದ ಜೀವ ಬೆದರಿಕೆ: ಆರೋಪ
ಕಲಬುರಗಿ: ಮೂರು ತಿಂಗಳಿನಿಂದ ಸಾಲದ ಕಂತು ಪಾವತಿಸದ ವ್ಯಕ್ತಿಯೊಬ್ಬರಿಗೆ ಖಾಸಗಿ ಫೈನಾನ್ಸ್ ಕಂಪನಿಯೊಂದು ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
‘ಎರಡು ವರ್ಷದ ಹಿಂದೆ ಫೈನಾನ್ಸ್ನಿಂದ ₹ 1.19 ಲಕ್ಷ ಸಾಲ ಪಡೆದಿದ್ದೆ. 25 ಕಂತು ಕಟ್ಟಿದ್ದು, ಮೂರು ತಿಂಗಳಿನಿಂದ ಕಂತು ಕಟ್ಟಿರಲಿಲ್ಲ. ಫೈನಾನ್ಸ್ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿ ಹಣ ಕಟ್ಟದಿದ್ದರೆ, ಲೊಕೇಷನ್ ಹಾಕಿಕೊಂಡು ಬಂದು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ನಗರದ ಇಸ್ಲಾಮಾಬಾದ್ ಕಾಲೊನಿಯ ನಿವಾಸಿ ಸೈಯದ್ ಆಮೀರ್ ರೋಜಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
36 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ
ಕಲಬುರಗಿ: ನಗರದ ತಾಜ್ಸುಲ್ತಾನಪುರ ಪ್ರದೇಶದ ಶಿವಶಕ್ತಿ ಬಡಾವಣೆಯಲ್ಲಿ ಎರಡು ಮಳಿಗೆಗಳಲ್ಲಿ ಸಂಗ್ರಹಿಸಿದ್ದ ಒಟ್ಟು 35.80 ಕ್ವಿಂಟಲ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಜಪ್ತಿ ಮಾಡಿಕೊಂಡಿದ್ದಾರೆ.
ಇದರ ಒಟ್ಟು ಮೌಲ್ಯ ₹1.25 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕುರಿತು ನಾಲ್ವರ ವಿರುದ್ಧ ಚೌಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.