ADVERTISEMENT

ನ್ಯಾಷನಲ್‌ ಸ್ಕೂಲ್‌ ಗೇಮ್ಸ್‌: ರಾಷ್ಟ್ರಮಟ್ಟಕ್ಕೆ ಕಲಬುರಗಿ ಜಿಲ್ಲೆಯ ಮೂವರು ಆಯ್ಕೆ

ಮಲ್ಲಪ್ಪ ಪಾರೇಗಾಂವ
Published 28 ನವೆಂಬರ್ 2025, 6:25 IST
Last Updated 28 ನವೆಂಬರ್ 2025, 6:25 IST
ಹಾಕಿ ಆಟಗಾರರಾದ ಸಮರ್ಥ, ಹರ್ಷವರ್ಧನ, ಕಿಶೋರ
ಹಾಕಿ ಆಟಗಾರರಾದ ಸಮರ್ಥ, ಹರ್ಷವರ್ಧನ, ಕಿಶೋರ   

ಕಲಬುರಗಿ: ಜಿಲ್ಲೆಯಲ್ಲಿ ಹಾಕಿ ಕ್ರೀಡೆಗೆ ಅಗತ್ಯ ಮೂಲಸೌಲಭ್ಯಗಳಿಲ್ಲದಿದ್ದರೂ, ಪ್ರತಿಭೆಗಳ ಸಾಧನೆಯ ಹೆಜ್ಜೆಗಳು ಒಂದೊಂದಾಗಿ ಮೂಡುತ್ತಿವೆ. ಜಿಲ್ಲೆಯ ಕಿರಿಯ ಹಾಕಿಪಟುಗಳಾದ ಹರ್ಷವರ್ಧನ, ಕಿಶೋರ ಮತ್ತು ಸಮರ್ಥ, 14 ವರ್ಷದೊಳಗಿನವರ 69ನೇ ನ್ಯಾಷನಲ್‌ ಸ್ಕೂಲ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ. ಡಿಸೆಂಬರ್‌ ಕೊನೆಯ ವಾರದಲ್ಲಿ ಮಧ್ಯಪ್ರದೇಶದ ಗುಣಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿರುವ ಹರಕುಮುರುಕಾದ ಅಂಗಣದಲ್ಲೇ ನಿರಂತರ ಅಭ್ಯಾಸ ಹಾಗೂ ಪರಿಶ್ರಮ ವಹಿಸಿದ್ದಕ್ಕೆ ದೊರೆತ ಪ್ರತಿಫಲ ಇದು.

ಹಾಸನದಲ್ಲಿ ನವೆಂಬರ್‌ 21ರಿಂದ 23ರವರೆಗೆ ನಡೆದ 14 ವರ್ಷದೊಳಗಿನವರ ರಾಜ್ಯಮಟ್ಟದ ಸ್ಕೂಲ್ ಗೇಮ್ಸ್‌ನ ಹಾಕಿ ಟೂರ್ನಿಯಲ್ಲಿ ಕಲಬುರಗಿ ವಿಭಾಗ ತಂಡವು ಉತ್ತಮ ಪ್ರದರ್ಶನ ತೋರಿ ಪ್ರಶಸ್ತಿ ಜಯಿಸಿತ್ತು. ಈ ತಂಡದಲ್ಲಿ ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಹಾಸ್ಟೆಲ್‌ನ 7 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಮೂವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಲಬುರಗಿ ವಿಭಾಗ ತಂಡವು ಟೂರ್ನಿಯಲ್ಲಿ ಕೂಡಿಗೆ ತಂಡ, ಬೆಂಗಳೂರು ವಿಭಾಗ ತಂಡ, ಮೈಸೂರು ವಿಭಾಗ ತಂಡ ಹಾಗೂ ಬೆಳಗಾವಿ ವಿಭಾಗ ತಂಡಗಳನ್ನು ಸೋಲಿಸಿ, 12 ಅಂಕಗಳನ್ನು ಕಲೆಹಾಕುವ ಮೂಲಕ ಪ್ರಶಸ್ತಿ ಜಯಿಸಿತ್ತು.

ADVERTISEMENT

ಮೊದಲ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಬಾಲಕರ ಕುಟುಂಬಗಳ ಹಿನ್ನೆಲೆ ಹೇಳಿಕೊಳ್ಳುವಂತಿಲ್ಲ. ಬಡವರಾಗಿದ್ದು, ಜೀವನ ನಿರ್ವಹಣೆಗಾಗಿ ಕೃಷಿ, ಕೂಲಿ ಕಾರ್ಮಿಕರರಾಗಿದ್ದಾರೆ.

ಕೆಲಸ ಅರಸಿ ಹೈದರಾಬದ್‌ಗೆ ಗುಳೆ:

ಕಾಳಗಿಯ ಕಿಶೋರ್‌ ಕುಟುಂಬಕ್ಕೆ ಆದಾಯವಿಲ್ಲ. ಹೀಗಾಗಿ ತಂದೆ ಗೋವಿಂದ ಅವರು, ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹಳ್ಳದ ದಂಡೆಯಲ್ಲಿರುವ 1 ಎಕರೆ ಹೊಲ ಇದ್ದೂ ಇಲ್ಲದಂತಿದೆ. ಕೆಲಸ ಅರಸಿ ಹೈದರಾಬಾದ್‌ಗೆ ತೆರಳಿರುವ ಅವರು, ರಸ್ತೆಗೆ ಹಾಕುವ ಜಲ್ಲಿಕಲ್ಲು ಒಡೆದು ಜೀವನ ಸಾಗಿಸುತ್ತಾರೆ. ಎರಡು–ಮೂರು ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಾರೆ.

‘ಅದೆಲ್ಲ ನಮಗೆ ಗೊತ್ತಾಗುವುದಿಲ್ಲ ಸರ್‌, ನಾವು ಕೂಲಿ ಮಾಡಿ ಜೀವನ ಮಾಡುತ್ತೇವೆ. ಒಟ್ಟಿನಲ್ಲಿ ಮಗ ಸಾಧನೆ ಮಾಡಿದರೆ ಸಾಕು. ನಾವು ಕಷ್ಟ ಪಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದು ತಂದೆ ಗೋವಿಂದ ಅವರು ಭಾವುಕರಾದರು.

ಮಳೆಯ ಮೇಲಿನ ಬೆಳೆ…:

ಮಾದನಹಿಪ್ಪರಗಾದ ಸಮರ್ಥ್‌ ಅವರದ್ದು ಕೃಷಿ ಕುಟುಂಬ. ಮೂರು ಎಕರೆ ಹೊಲ ಇದೆ. ಆದರೆ, ಮಳೆಯಾದರೆ ಮಾತ್ರ ಬೆಳೆ ಸಿಗುತ್ತದೆ. ಅತಿವೃಷ್ಟಿಯಿಂದಾಗಿ ಈ ವರ್ಷ ಅದೂ ಇಲ್ಲ. ‘ನಾವಿಬ್ಬರೂ(ಪತಿ–ಪತ್ನಿ) ಅಲ್ಲಿ ಇಲ್ಲಿ ಕೆಲಸ ಮಾಡಿ, ಜೀವನ ಮಾಡುತ್ತೇವೆ. ಮಳೆಯಾದೆ ಬೆಳೆ ಬರುತ್ತದೆ, ಇಲ್ಲದಿದ್ದರೆ ಇಲ್ಲ’ ಎಂದು ಲಕ್ಷ್ಮಣ ಬಜಾರೆ ಹೇಳಿದರು.

‘ಊರಲ್ಲಿ ಯಾರೋ ಹೇಳಿದ್ರು, ರನ್ನಿಂಗ್‌ ಕಾಂಪಿಟೇಷನ್‌ ಇದೇ ಅಂತ. ಮಗನ್ನ ಕರ್ಕೊಂಡು ಬಂದ್ವಿ, ಓಡಿದ ಸೆಲೆಕ್ಷನ್‌ ಆದ, ಹೀಗಾಗಿ ಇಲ್ಲಿಯೇ ಹಾಸ್ಟೆಲ್‌ಗೆ ಸೇರಿಸಿದ್ವಿ. ಈಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸಂತೋಷ ಆಗೇತ್ರಿ’ ಎಂದು ಹೇಳಿದರು.

ಸಂಜಯ್‌ ಬಾಣಾದ
‘ಟರ್ಫ್‌ ಗ್ರೌಂಡ್‌ ನಿರ್ಮಿಸಿಕೊಡಿ’
ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬುದು ನಮ್ಮ ಕನಸು. ಅದಕ್ಕಾಗಿ ನಾವು ಪ್ರಯತ್ನಿಸುತ್ತೇವೆ ಎಂದು ಹಾಕಿಪಟುಗಳಾದ ಸಮರ್ಥ್‌ ಹರ್ಷವರ್ಧನ ಕಿಶೋರ ಹೇಳಿದರು. ನಿತ್ಯ ಬೆಳಿಗ್ಗೆ ಹಾಗೂ ಸಂಜೆ 4 ತಾಸುಗಳ ಕಠಿಣ ಅಭ್ಯಾಸ ನಡೆಸುತ್ತೇವೆ. ರಾಜ್ಯಮಟ್ಟದ ಟೂರ್ನಿಯಲ್ಲಿಯೂ ಆಗಿರುವ ತಪ್ಪುಗಳನ್ನು ನಮ್ಮ ತರಬೇತುದಾರರು ತಿಳಿಸಿದ್ದಾರೆ. ಅವುಗಳನ್ನು ತಿದ್ದಿಕೊಂಡು ರಾಷ್ಟ್ರಮಟ್ಟದ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ತೋರುತ್ತೇವೆ. ‘ನಮ್ಮ ಹಾಕಿ ಅಂಗಣ ಹಾಳಾಗಿದ್ದು ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈಗ ಹಾಕಿರುವ ಮ್ಯಾಟ್‌ ಬಹುತೇಕ ಕಡೆ ಕಿತ್ತು ಹೋಗಿದ್ದು ಪಕ್ಷದಲ್ಲಿ ಅಳವಡಿಸಿರುವ ಮರದ ಹಲಗೆಗಳಿಂದಾಗಿ ನಿರ್ಭಿಡೆಯಿಂದ ಆಡಲು ಆಗುವುದಿಲ್ಲ. ಹೀಗಾಗಿ ನಮಗೆ ಹೊಸ ಟರ್ಫ್‌ ಗ್ರೌಂಡ್‌ ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು.
‘ಟರ್ಫ್‌ ಇದ್ದರೆ ಪ್ರತಿಭೆಗಳಿಗೆ ಅವಕಾಶ’
‘ರಾಜ್ಯ ಮಟ್ಟದಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಖುಷಿಯಾಗಿದೆ. ಅಲ್ಲಿ ಟರ್ಫ್ ಅಂಗಣದ ಮೇಲೆ‌ ಆಡಬೇಕು. ಆದರೆ ನಮ್ಮಲ್ಲಿ ಟರ್ಫ್‌ ಮೈದಾನದ ಸೌಲಭ್ಯವಿಲ್ಲ. ನಮ್ಮ ಜಿಲ್ಲೆಗೊಂದು ಟರ್ಫ್‌ ಸೌಲಭ್ಯವಿದ್ದರೆ ಇನ್ನಷ್ಟು ಸಾಧನೆ ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಇನ್ನಷ್ಟು ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ’ ಎಂದು ಹಾಕಿ ತರಬೇತುದಾರ ಸಂಜಯ ಬಾಣಾದ ಹೇಳಿದರು. ‘ಭಾರತಕ್ಕೆ ಪದಕ ತರಲಿ’:  ‘ನಮ್ಮ ಮಗ ಹಾಕಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿಯಾಗಿದೆ. ಮುಂಬರುವ ದಿನಗಳಲ್ಲಿ ಭಾರತ ತಂಡವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲಿ ಭಾರತಕ್ಕೆ ಪದಕ ತರಲಿ ಎಂಬ ಆಸೆಯಿದೆ’ ಎಂದು ಆಳಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಹೊರಗುತ್ತಿಗೆ ನೌಕರರಾಗಿರುವ ಹರ್ಷವರ್ಧನನ ತಂದೆ ಕಾಳಪ್ಪ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.