ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಕಲಬುರಗಿ: ನಗರದ ಸರಾಫ್ ಬಜಾರ್ನ ವಾಣಿಜ್ಯ ಸಂಕೀರ್ಣವೊಂದರ ಮೊದಲ ಮಹಡಿಯಲ್ಲಿರುವ ಮಾಲೀಕ್ ಜುವೆಲರ್ಸ್ ಚಿನ್ನಾಭರಣ ಮಳಿಗೆಯಲ್ಲಿ ಶುಕ್ರವಾರ ಹಾಡಹಗಲೇ ದರೋಡೆ ನಡೆದಿದೆ.
ನಾಲ್ವರು ಆರೋಪಿಗಳ ತಂಡವು ಅಂಗಡಿಯಲ್ಲಿದ್ದ ಮಾಲೀಕನ ತಲೆಗೆ ಗನ್ಯಿಟ್ಟು ತಿಜೋರಿ ಬಾಗಿಲು ತೆರೆಸಿ, ಚಿನ್ನಾಭರಣ ಕದ್ದು, ಬಳಿಕ ಅಂಗಡಿ ಮಾಲೀಕನ ಕೈಕಾಲು ಕಟ್ಟಿ ಪರಾರಿಯಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದರೋಡೆ ನಡೆದಿದೆ.
ಖದೀಮರು ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್ ಧರಿಸಿ ಮಳಿಗೆ ಪ್ರವೇಶಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ದರೋಡೆ ಘಟನೆಯ ಮಾಹಿತಿ ಪಡೆದಿದ್ದಾರೆ. ಶ್ವಾನದಳ, ಬೆರಳಚ್ಚು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಕುರಿತು ಮಾತನಾಡಿದ ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ‘ಜನನಿಬಿಡ ಪ್ರದೇಶವಾದ ಕಲಬುರಗಿಯ ಸರಾಫ್ ಬಜಾರ್ನ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಚಿನ್ನಾಭರಣ ತಯಾರಿಸುವ ಅಂಗಡಿಯಲ್ಲಿ ದರೋಡೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ನಾಲ್ವರು ಆರೋಪಿಗಳ ತಂಡ ಶುಕ್ರವಾರ ಮಧ್ಯಾಹ್ನ 12ರಿಂದ 12.45ರ ಅವಧಿಯಲ್ಲಿ ಈ ಕೃತ್ಯ ಎಸೆಗಿದೆ. ಅಂದಾಜು ಎರಡೂವರೆಯಿಂದ ಮೂರು ಕೆ.ಜಿಗಳಷ್ಟು ಚಿನ್ನಾಭರಣ ಕಳವಾದ ಮಾಹಿತಿ ದೊರೆತಿದೆ. ಆರೋಪಿಗಳ ಪತ್ತೆಗೆ ಈಗಾಗಲೇ ಐದು ತಂಡಗಳನ್ನು ರಚಿಸಲಾಗಿದ್ದು, ನಗರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.