ADVERTISEMENT

ಕಲಬುರಗಿ | ದೇಶದ ಸಮಸ್ಯೆಗಳಿಗೆ ಕ್ರಾಂತಿಯೇ ಪರಿಹಾರ: ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:52 IST
Last Updated 2 ಫೆಬ್ರುವರಿ 2026, 2:52 IST
ಕಲಬುರಗಿಯ ಹಿಂದಿ ಪ್ರಚಾರ ಸಭಾದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಭಾನುವಾರ ನಡೆದ ಸಭೆಯಲ್ಲಿ ಕಾರ್ಮಿಕ ಮುಖಂಡ ಅಶೋಕ ಘೂಳಿ ಮಾತನಾಡಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಹಿಂದಿ ಪ್ರಚಾರ ಸಭಾದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಭಾನುವಾರ ನಡೆದ ಸಭೆಯಲ್ಲಿ ಕಾರ್ಮಿಕ ಮುಖಂಡ ಅಶೋಕ ಘೂಳಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಎಲ್ಲವೂ ಬಣ್ಣದ ಸರ್ಕಾರಗಳೇ. ಬಿಜೆಪಿ, ಕಾಂಗ್ರೆಸ್, ‌ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ಬಂಡವಾಳಶಾಹಿಗಳ ಪರವಾಗಿಯೇ ಕೆಲಸ ಮಾಡುತ್ತಿವೆ. ಈ ವ್ಯವಸ್ಥೆ ಕಿತ್ತುಹಾಕಲು ದೇಶದಲ್ಲೂ ಕ್ರಾಂತಿ ಆಗಬೇಕು’ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮುಖಂಡರು ಒಕ್ಕೊರಲಿನಿಂದ ಪ್ರತಿಪಾದಿಸಿದರು.

ಕೇಂದ್ರ‌ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಫೆಬ್ರುವರಿ 12ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರಕ್ಕೆ ಪೂರಕವಾಗಿ ನಗರದ ಸೇಡಂ ರಸ್ತೆಯ ಕರ್ನಾಟಕ ಹಿಂದಿ ಪ್ರಚಾರ ಸಭಾದಲ್ಲಿ ಭಾನುವಾರ ಕಾರ್ಮಿಕರ ಜಿಲ್ಲಾಮಟ್ಟ ಸಮಾವೇಶ ನಡೆಯಿತು.

ಕಾರ್ಮಿಕ ಮುಖಂಡ ಸಿದ್ದಪ್ಪ ಪಾಲ್ಕಿ ಮಾತನಾಡಿ, ‘ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ. ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಅವಕಾಶವೂ ಇಲ್ಲ. ದುಡಿಯುವ ವರ್ಗವನ್ನು ಆಧುನಿಕ ಜೀತಪದ್ಧತಿಗೆ ತಳ್ಳುತ್ತಿದೆ. ದುಡಿಯುವ ವರ್ಗಗಳ ವಿರುದ್ಧ, ಬಂಡವಾಳಶಾಹಿಗಳ ಪರ, ದೇಶದ ಸಂವಿಧಾನ ಆಶಯಗಳ ಬದ್ಧತೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಸರ್ಕಾರ ಹೋರಾಟ ರೂಪಿಸಿದರೆ ಜಾತಿ, ಧರ್ಮ, ಭಾಷೆ ಎಂದೆಲ್ಲ ಏಕತೆ ಒಡಕು ಮೂಡಿಸಲಾಗುತ್ತಿದೆ. ಈ ದೇಶದ ಪ್ರಜೆಗಳಾದ ನಾವೆಲ್ಲರೂ ಒಂದು, ಸಂವಿಧಾನ ನಮ್ಮ ಗ್ರಂಥ. ಯಾವುದೇ ಸರ್ಕಾರಗಳು ಬಂದರೂ, ಸಂವಿಧಾನದ ಆಶಯಕ್ಕೆ ತಕ್ಕಂತೆ ಕಾಯ್ದೆಗಳನ್ನು ಜಾರಿಗೊಳಿಸುವಂತೆ ನಾವೆಲ್ಲ ಹೋರಾಟ ನಡೆಸಬೇಕಿದೆ’ ಎಂದರು.

ಮುಖಂ‌ಡ ಎಂ.ಬಿ.ಸಜ್ಜನ ಮಾತನಾಡಿ, ‘ಈ ನಾಲ್ಕೂ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸುತ್ತವೆ. ಈ ಸಂಹಿತೆಗಳನ್ನು ರಾಜ್ಯ ಸರ್ಕಾರವೂ ಬೆಂಬಲಿಸುತ್ತಿರುವುದು ವಿಪರ್ಯಾಸ. ರಾಜ್ಯ ಸರ್ಕಾರವೂ ಕೇರಳ ಸರ್ಕಾರದಂತೆ ನಾಲ್ಕೂ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ ಕನಿಷ್ಠ ‌ವೇತನ ಜಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಅಡ್ಡಗಾಲು ಹಾಕುತ್ತಿದ್ದಾರೆ‌.‌ ಜನ ನಿಮಗೆ ಬಡವರ ಪರ ಕೆಲಸ ಮಾಡಲು ಅಧಿಕಾರ ಕೊಟ್ಟಿದ್ದಾರೆಯೇ ಹೊರತು ಬಡಜನರ ಹೊಟ್ಟೆ ಮೇಲೆ ಹೊಡೆಯಲು ಅಲ್ಲ‌’ ಎಂದು ಹರಿಹಾಯ್ದರು.

ಕಾರ್ಮಿಕ ಮುಖಂಡ ಅಶೋಕ ಘೂಳಿ 12 ನಿರ್ಣಯಗಳನ್ನು ಮಂಡಿಸಿದರು. ಸಮಾವೇಶದಲ್ಲಿ ಪಾಲ್ಗೊಂಡವರು ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಫೆ.12ರಂದು ನಡೆಯಲಿರುವ ಭಾರತ ಬಂದ್ ಮುಷ್ಕರ ಯಶಸ್ವಿಗೊಳಿಸಲು ಸಮಾವೇಶದಲ್ಲಿ ನಿರ್ಣಯಿಸಲಾಯಿತು.

ಮುಖಂಡ ಪ್ರಭುದೇವ ಯಳಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ಮುಖಂಡರಾದ ಚಂದು ಜಾಧವ ಮಾತನಾಡಿದರು. ಕಾರ್ಮಿಕ ಮುಖಂಡರಾದ ಎಚ್‌.ಎಸ್‌.ಪತಕಿ, ವಿ.ಜಿ.ದೇಸಾಯಿ, ಯಲ್ಲಪ್ಪ ಕುರಡೇಕರ ಇದ್ದರು.

‘ರೈತರ ಮಾದರಿ ಹೋರಾಟ ಅಗತ್ಯ’

‘ಇಡೀ ದೇಶದಲ್ಲಿ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೇಶದ ಅನ್ನದಾತರು ನಡೆಸಿದ ಚಳವಳಿಯಂತೆಯೇ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ಕಾರ್ಮಿಕರು ಹೋರಾಟ ನಡೆಸಬೇಕಿದೆ’ ಎಂದು ಮುಖಂಡ ಮಲ್ಲಿಕಾರ್ಜುನ ಎಚ್‌.ಟಿ ಪ್ರತಿಪಾದಿಸಿದರು. ‘ಸಮ ಸಮಾಜದ ಆಶಯಗಳೊಂದಿಗೆ ಡಾ.ಬಿ.ಆರ್‌.ಅಂಬೇಡ್ಕರ್ ಬರೆದ ಸಂವಿಧಾನ ಇಂದು ಬುಡಮೇಲಾಗುತ್ತಿದೆ. ಫ್ಯಾಸಿಸ್ಟ್‌ ಶಕ್ತಿಗಳು ಬಂಡವಾಳಶಾಹಿ ಪರ ಕೆಲಸ ಮಾಡುತ್ತಿವೆ. ಇವುಗಳ ವಿರುದ್ಧ 1917ರಲ್ಲಿ ಲೆನಿನ್‌ ನಡೆಸಿದಂತೆ ಭಾರತದಲ್ಲೂ ಕ್ರಾಂತಿ ಆಗಬೇಕು. ಕಾರ್ಮಿಕರ ಸರ್ಕಾರ ಬರಬೇಕು. ಆಗ ಮಾತ್ರವೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ’ ಎಂದರು. ‘ನಾಲ್ಕು ಕಾರ್ಮಿಕ ಕೋಡ್‌ಗಳು ಮೋದಿ ಯೋಗಿ ಅದಾನಿ ಅಂಬಾನಿ ಕೋಡ್‌(ಡು)ಗಳಾಗಿವೆ. ದೇಶದ ಜನರ ದುಡಿಯುವ ಕೈಗಳಿಗೆ ಕೆಲಸ ಹಸಿದ ಹೊಟ್ಟೆಗೆ ಅನ್ನ ಕಲಿಯುವ ಮನಸುಗಳಿಗೆ ವಿದ್ಯೆ ಬೇಕಿದೆ. ಆದರೆ ಅಂಥ ಕಾಯ್ದೆಗಳನ್ನು ಸರ್ಕಾರ ಜಾರಿಗೊಳಿಸುತ್ತಿಲ್ಲ. ಬದಲಿಗೆ ಎಂ.ಎಸ್‌. ಗೋಲ್ವಾಲ್ಕರ್‌  ಕಾರ್ಯಸೂಚಿಯನ್ನು ಗುಪ್ತವಾಗಿ ಬಿತ್ತುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.