ಚಿತ್ತಾಪುರ: ತಾಲ್ಲೂಕಿನ ದಂಡಗುಂಡ ಗ್ರಾಮದ ಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಆಕಳ ಕರುವಿನ ಮೇಲೆ ದಾಳಿ ಮಾಡಿ ತಿನ್ನಲು ಮುಂದಾಗಿದೆ. ಈ ಸಂದರ್ಭದಲ್ಲಿ ಧೈರ್ಯ ತೋರಿದ ವ್ಯಕ್ತಿ ಜೋರಾಗಿ ಕಿರುಚಿದಾಗ ಚಿರತೆ ಕರುವನ್ನು ಬಿಟ್ಟು ಪರಾರಿಯಾಗಿದೆ.
ಶನಿವಾರ ಈ ಘಟನೆ ನಡೆದಿದೆ. ಗ್ರಾಮದ ಹಣಮಂತ ಭೀಮಣ್ಣ ಎಂಬುವವರು ತನ್ನ ಆಕಳ ಕರುವನ್ನು ಚಿರತೆಯೊಂದು ಎಳೆದೊಯುತ್ತಿರುವುದು ಗಮನಿಸಿ ಜೋರಾಗಿ ಚೀರಾಡಿದ್ದಾರೆ. ಆಗ ಚಿರತೆ ಬೆದರಿದೆ. ಇತರೆ ದನಗಳು ದಾಳಿ ಮಾಡಲು ಮುಂದಾದಾಗ ಭಯಗೊಂಡ ಚಿರತೆಯು ಕರುವನ್ನು ಬಿಟ್ಟು ಓಡಿದೆ.
ಕರುವಿಗೆ ಚಿರತೆ ಹಿಡಿದಿದ್ದರಿಂದ ತೀವ್ರ ಗಾಯವಾಗಿದೆ. ಕರುವು ಹಾಲು ಕುಡಿಯುತ್ತಿಲ್ಲ. ಬಾಯಿಯಲ್ಲಿ ರೊಟ್ಟಿ ಇಟ್ಟರೂ ತಿನ್ನುತ್ತಿಲ್ಲ ಎಂದು ಹಣಮಂತ ಭಾನುವಾರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.
ಕಳೆದ ಸೆ.2ರಂದು ರಾತ್ರಿ ದಂಡಗುಂಡ ಗ್ರಾಮದಿಂದ ಯಾಗಾಪುರಕ್ಕೆ ಸಂಪರ್ಕಿಸುವ ರಸ್ತೆಯ ಮಾರ್ಗದಲ್ಲಿ ಚಿರತೆಯೊಂದು ಕಾರಿನ ಲೈಟಿನ ಬೆಳಕಿನಲ್ಲಿ ಗೋಚರಿಸಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ತಂಡ ಅರಣ್ಯದಲ್ಲಿ ಕಾರ್ಯಾಚರಣೆ ನಡೆಸಿ ಕಬ್ಬಿಣದ ಬೋನು ಅಳವಡಿಸಲಾಗಿತ್ತು. ಆದರೆ, ಚಿರತೆ ಅತ್ತ ಸುಳಿಯಲೇ ಇಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ರೈತರು ಮತ್ತು ದನಗಾಹಿಗಳು ಕುರಿ, ಆಡು, ಹಸು, ಎಮ್ಮೆಗಳನ್ನು ಮೇಯಿಸಲೆಂದು ಅಡವಿಗೆ ಹೋದಾಗ ಸಹಜವಾಗಿ ಅರಣ್ಯ ಪ್ರದೇಶದಲ್ಲಿ ಹೋಗುತ್ತಾರೆ. ಅರಣ್ಯದೊಳಗಿರುವ ಚಿರತೆ ಅಹಾರಕ್ಕೆಂದು ಬಯಲಿಗೆ ಬಂದಾಗ ದಾಳಿ ಮಾಡಿ ಹಸು, ಕುರಿ, ಆಡುಗಳನ್ನು ಬೇಟೆಯಾಡುತ್ತದೆ ಎಂದು ದಂಡಗುಂಡ ಗ್ರಾಮಸ್ಥರು ಹೇಳುತ್ತಾರೆ.
ಆಕಳ ಕರುವಿಗೆ ಚಿರತೆಯು ಹಿಡಿದು ಗಾಯಗೊಳಿಸಿ ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ಮಾಡುತ್ತೇವೆ.-ವಿಜಯಕುಮಾರ ಬಡಿಗೇರ, ವಲಯ ಅರಣ್ಯಾಧಿಕಾರಿ, ಚಿತ್ತಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.