ADVERTISEMENT

ಕಲಬುರಗಿ | ‘ಮಕ್ಕಳಲ್ಲಿ ಗ್ರಂಥಾಲಯ ಸಂಸ್ಕೃತಿ ಬೆಳೆಸಿ’

ಗ್ರಂಥಾಲಯ ಪಿತಾಮಹ ಎಸ್‌.ಆರ್‌.ರಂಗನಾಥನ್‌ ಅವರ ಚಿತ್ರಕ್ಕೆ ಗಣ್ಯರಿಂದ ಪುಷ್ಪ ನಮನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:54 IST
Last Updated 13 ಆಗಸ್ಟ್ 2025, 5:54 IST
ಕಲಬುರಗಿ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಗ್ರಂಥಪಾಲಕರು ಹಾಗೂ ಗ್ರಂಥಾಲಯಗಳಿಗೆ ನೆರವಾದ ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮ ಮಹಾದೇವನ್‌, ನಲಿನ್‌ ಅತುಲ್, ಭಂವರ್‌ಸಿಂಗ್ ಮೀನಾ, ಸಾಹಿತ್ಯಾ ಆಲದಕಟ್ಟಿ ಪಾಲ್ಗೊಂಡಿದ್ದರು
ಕಲಬುರಗಿ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಗ್ರಂಥಪಾಲಕರು ಹಾಗೂ ಗ್ರಂಥಾಲಯಗಳಿಗೆ ನೆರವಾದ ಸಂಸ್ಥೆಗಳ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮ ಮಹಾದೇವನ್‌, ನಲಿನ್‌ ಅತುಲ್, ಭಂವರ್‌ಸಿಂಗ್ ಮೀನಾ, ಸಾಹಿತ್ಯಾ ಆಲದಕಟ್ಟಿ ಪಾಲ್ಗೊಂಡಿದ್ದರು   

ಕಲಬುರಗಿ: ‘21ನೇ ಶತಮಾನದಲ್ಲಿ ವಿದ್ಯಾರ್ಥಿಗಳು ಬರೀ ಕಂಠಪಾಠ ಮಾಡಿ ಪರೀಕ್ಷೆಗಳಲ್ಲಿ ಉತ್ತರ ಬರೆದರೆ ಸಾಲದು. ಕ್ರಿಯಾಶೀಲತೆ, ವಿಮರ್ಶಾತ್ಮಕ ಚಿಂತನೆ, ಸ್ವಯಂ ಅಧ್ಯಯನದ ಕೌಶಲವೂ ಅಗತ್ಯ. ಗ್ರಂಥಾಲಯ ಸಂಸ್ಕೃತಿಯಿಂದ ಇದು ಸಾಧ್ಯ’ ಎಂದು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಉಮಾ ಮಹಾದೇವನ್‌ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಬರೀ ರಸ್ತೆ, ಚರಂಡಿಗಳು ಮಾತ್ರವಲ್ಲದೇ ಗ್ರಂಥಾಲಯ ಕೂಡ ಬಹುಮುಖ್ಯವಾದ ಸಾಮಾಜಿಕ ಮೂಲಸೌಕರ್ಯವಾಗಿದೆ. ಹೀಗಾಗಿ ಸುಸಜ್ಜಿತ ಗ್ರಂಥಾಲಯ ಸ್ಥಾಪಿಸಿ, ಕುಡಿಯುವ ನೀರು, ಶೌಚಾಲಯ, ಉತ್ತಮ ಪೀಠೋಪಕರಣದಂಥ ಸೌಲಭ್ಯಗಳನ್ನು ಒದಗಿಸಬೇಕು’ ಎಂದರು.

ADVERTISEMENT

‘ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಜೀವನದ ಯಾವುದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಗ್ರಂಥಾಲಯದಲ್ಲಿ ಚಟುವಟಿಕೆಗಳು ನೆರವಾಗುತ್ತವೆ. ಗ್ರಂಥಾಲಯಗಳಲ್ಲಿ ಮಕ್ಕಳು ಹೆಚ್ಚೆಚ್ಚು ಪಾಲ್ಗೊಂಡು, ಓದು–ಬರಹ, ಚರ್ಚೆಗಳಂಥ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕಿದೆ. ಅವರಲ್ಲಿ ಓದಿನ ಸಂಸ್ಕೃತಿ, ಗ್ರಂಥಾಲಯ ಬಳಕೆಯ ಸಂಸ್ಕೃತಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯದಾದ್ಯಂತ ₹266 ಕೋಟಿ ವೆಚ್ಚದಲ್ಲಿ 6,600 ಗ್ರಾಮ ಗ್ರಂಥಾಲಯಗಳನ್ನು ತೆರೆಯುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ ಮಾತನಾಡಿ, ‘ಜನರು ಬೆಳಿಗ್ಗೆ ಚಹಾದಂಗಡಿಗಳಲ್ಲಿ ಕುಳಿತು ಏನೇನೋ ವಿಚಾರಗಳನ್ನು ಚರ್ಚಿಸುತ್ತಾರೆ. ಅವರನ್ನು ಗ್ರಂಥಾಲಯಗಳತ್ತ ಸೆಳೆದು, ಅವರಿಗೆ ದಿನಪತ್ರಿಕೆಗಳು, ವೃತ್ತಪತ್ರಿಕೆಗಳನ್ನು ಏಕೆ ಒದಗಿಸಬಾರದು? ಅವರು ಓದಲಿ, ಬಳಿಕ ಚರ್ಚಿಸಲಿ. ಅದಕ್ಕೆ ಯಾಕೆ ಗ್ರಂಥಾಲಯಗಳನ್ನು ವೇದಿಕೆಯಾಗಿಸಬಾರದು? ಇತ್ತೀಚೆಗೆ ಅತಿಯಾದ ಡಿಜಿಟಲೀಕರಣದಿಂದ ಸಾಮಾಜಿಕ ನಿರ್ವಾತ ಸೃಷ್ಟಿಯಾಗುತ್ತಿದ್ದು, ಅದನ್ನು ತೊಡೆದು ಹಾಕಲು ಗ್ರಂಥಾಲಯಗಳು ಸೇತುವೆಯಾಗಿ ಕಾರ್ಯನಿರ್ವಹಿಸಬೇಕಿದೆ’ ಎಂದು ಪ್ರತಿಪಾದಿಸಿದರು.

‘ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳು ಕನಿಷ್ಠ ಶೇ 20ರಷ್ಟು ಅನುದಾನ ಗ್ರಂಥಾಲಯಗಳಿಗೆ ಮೀಸಲಿಡಬೇಕು ಎಂಬ ಸುತ್ತೋಲೆಯಿದೆ. ಅದರಂತೆ ಕಳೆದೊಂದು ವರ್ಷದಲ್ಲಿ ₹3 ಕೋಟಿ ವೆಚ್ಚದಲ್ಲಿ ಜಿಲ್ಲೆಯ 100 ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಕಲಬುರಗಿ ಉಪವಿಭಾಧಿಕಾರಿ ಸಾಹಿತ್ಯಾ ಆಲದಕಟ್ಟಿ ವೇದಿಕೆಯಲ್ಲಿದ್ದರು. ಕಲಬುರಗಿ ತಾ.ಪಂ.ಇಒ ಸೈಯದ್ ಪಟೇಲ್‌ ಸ್ವಾಗತಿಸಿದರು. ಆಳಂದ ತಾ.ಪಂ.ಇಒ ಮಾನಪ್ಪ ಕಟ್ಟಿಮನಿ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಗುರುಬಾಯಿ ಪಾಟೀಲ ನಿರೂಪಿಸಿದರು.

ಸಾಧಕ ಗ್ರಂಥಪಾಲಕರಿಗೆ ಸನ್ಮಾನ ಗ್ರಂಥಾಲಯಗಳ ಪ್ರಗತಿಗೆ ಕೈಜೋಡಿಸಿದ ಸಂಸ್ಥೆಗೂ ಗೌರವ ಕಾರ್ಯಕ್ರಮದಲ್ಲಿ ನೂರಾರು ಗ್ರಂಥಪಾಲಕರು ಭಾಗಿ

ಪಠ್ಯದ ಓದು ಸೀಮಿತ ಜ್ಞಾನ ನೀಡಿದರೆ ಗ್ರಂಥಾಲಯಗಳ ಓದು ಅಪರಿಮಿತ ಜ್ಞಾನಕ್ಕೆ ದಾರಿಯಾಗುತ್ತದೆ. ಗ್ರಂಥಾಲಯಗಳಿಂದ ಸಾಮಾಜಿಕ ಶೈಕ್ಷಣಿಕ ಕ್ರಾಂತಿ ಸಾಧ್ಯ
ನಲಿನ್‌ ಅತುಲ್‌ ಕೆಕೆಆರ್‌ಡಿಬಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.