ADVERTISEMENT

ಕಾಂಗ್ರೆಸ್‌ನಿಂದ ಸಂವಿಧಾನದ ವಿರೋಧಿ ನಡೆ: ಆಂದೋಲಾ ಶ್ರೀ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 7:15 IST
Last Updated 12 ಡಿಸೆಂಬರ್ 2025, 7:15 IST
ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಶಿವಸೇನಾ ಪಕ್ಷದಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು
ಕಲಬುರಗಿಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಶಿವಸೇನಾ ಪಕ್ಷದಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು   

ಕಲಬುರಗಿ: ‘ರಾಜ್ಯ ಸರ್ಕಾರ ರೂಪಿಸಿರುವ ದ್ವೇಷ ಭಾಷಣ ತಡೆ ಮತ್ತು ಗೋವುಗಳ ಅಕ್ರಮ ಸಾಗಣೆ, ಗೋಹತ್ಯೆ ನಿಷೇಧ ಕಾಯ್ದೆ ದುರ್ಬಲಗೊಳಿಸುವ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಬಾರದು’ ಎಂದು ಒತ್ತಾಯಿಸಿ ಶಿವಸೇನಾ ಪಕ್ಷದಿಂದ ನಗರದಲ್ಲಿ ಗುರುವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.

ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಸೇರಿದ ಶಿವಸೇನಾ ಮುಖಂಡರು, ಕಾರ್ಯಕರ್ತರು ಗುರುವಾರ ಮಧ್ಯಾಹ್ನದಿಂದ ಸಂಜೆ ತನಕ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿದರು.

ಭಾರತ ಮಾತೆ, ಗೋಮಾತೆ, ಗಂಗಾ ಮಾತೆ, ಸನಾತನ ಧರ್ಮ, ಶ್ರೀರಾಮನಿಗೆ ಜೈಕಾರ ಕೂಗಿದರು. ಜೊತೆಗೆ ‘ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ’, ‘ಗೋ ಹತ್ಯೆ ಕಾಯ್ದೆ ಸಡಿಲಗೊಳಿಸುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ’, ‘ಮುಸ್ಲಿಮರನ್ನು ಓಲೈಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಮೊಳಗಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ, ‘ರಾಜ್ಯ ಸರ್ಕಾರ ಹಿಂದೂ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ತಡೆ ಕಾಯ್ದೆ ಜಾರಿಗೊಳಿಸಲು ಹೊರಟಿದೆ. ಜೊತೆಗೆ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆ ಮೂಲಕ ಕಾಯ್ದೆ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಈ ಎರಡೂ ಮಸೂದೆಗಳ ಜಾರಿ ಹಿಂದೆ ಹಿಂದೂಗಳು, ಹಿಂದೂ ನೇತಾರರನ್ನು ಮುಗಿಸುವ ಷಡ್ಯಂತ್ರ ಅಡಗಿದೆ. ಇದು ಖಂಡನೀಯ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಸ್ತೆಗಳು, ಗಲ್ಲಿ–ಗಲ್ಲಿಗಳಲ್ಲಿ ಹಸುವಿನ ರಕ್ತ ಹರಿಯುತ್ತಿದೆ. ಸಂವಿಧಾನದ 48ನೇ ಅನುಚ್ಛೇದ ಗೋವುಗಳ ರಕ್ಷಣೆ ಬಗೆಗೆ ಹೇಳುತ್ತದೆ. ಆದರೆ, ಮುಸ್ಲಿಮರ ಓಲೈಕೆ, ಮತಬ್ಯಾಂಕ್‌ಗಾಗಿ ಕಾಂಗ್ರೆಸ್‌ ಸರ್ಕಾರ ಸಂವಿಧಾನದ ವಿರೋಧಿ ಮಸೂದೆ ಮಂಡನೆಗೆ ಹೊರಟಿದೆ’ ಎಂದು ದೂರಿದರು.

‘ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಶಿವಸೇನೆ ಪಕ್ಷದಿಂದ ಮಠಾಧೀಶರ ನೇತೃತ್ವದಲ್ಲಿ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಸಹಿಗಳನ್ನು ಸಂಗ್ರಹಿಸಿ ಇದನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು. ಈ ಎರಡೂ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗುವುದು’ ಎಂದರು.

ಮುಖಂಡ ಸಿದ್ರಾಮ ಹಿರೇಮಠ ಮಾತನಾಡಿ, ‘ಒಂದೆಡೆ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಪ್ರಾಣಿಗಳ ಮೇಲೆ ದಯೆ ಇರಲಿ ಎಂಬ ಸ್ಟೀಕರ್‌ ಅಂಟಿಸಲಾಗಿದೆ. ಮತ್ತೊಂದೆಡೆ ರಾಜ್ಯ ಸರ್ಕಾರವೇ ಗೋಹತ್ಯೆ ಕಾಯ್ದೆ ಸಡಿಲಗೊಳಿಸಲು ಮಸೂದೆ ಮಂಡಿಸುತ್ತಿದೆ. ಇದು ಖಂಡನೀಯ’ ಎಂದರು.

ಶಿವಸೇನಾ ಪಕ್ಷದ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ಬೇನೂರಿನ ಸಿದ್ಧರೇಣುಕ ಶಿವಾಚಾರ್ಯ, ಶ್ರೀನಿವಾಸ ಸರಡಗಿಯ ವೀರಭದ್ರ ಶಿವಾಚಾರ್ಯ, ರೋಹಿತ ಪಿಸ್ಕೆ, ಸುರೇಶ ತಳವಾರ, ಶಿವರಾಜ ಬಾಳಿ, ಪ್ರಶಾಂತ ಬಲ್ಕೂರ, ಕಿರಣ ಖಿಳೇಗಾಂವ, ಶೇಖರ ಖಾನಾಪುರ, ಶ್ರವಣಕುಮಾರ, ಸಂಗಮೇಶ ಪಾಟೀಲ ಸೇರಿದಂತೆ ಹಲವರಿದ್ದರು.

ಹಿಂದೂ ನೇತಾರರು ಭಾಷಣ ಮಾಡಿದರೆ ಮುಂದೆ ಅಧಿಕಾರಕ್ಕೆ ಬರಲ್ಲ ಎಂಬ ಭಯ ಕಾಂಗ್ರೆಸ್‌ಗೆ ಕಾಡುತ್ತಿದೆ. ಅದಕ್ಕೆ ಈ ಮಸೂದೆ ಮಂಡಿಸಿದೆ
ಸಿದ್ದಲಿಂಗ ಸ್ವಾಮೀಜಿ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.