ಕಲಬುರಗಿ: ರಕ್ಷಾ ಬಂಧನ ಆಚರಿಸಲು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮದಿಂದ ತವರು ಮನೆ ಕಲಬುರಗಿಗೆ ಬಂದಿದ್ದ ಮಹಿಳೆಯೊಬ್ಬರ ಚಿನ್ನ–ಬೆಳ್ಳಿ ಆಭರಣಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೇರಿ ಮೇಸ್ತ್ರಿ ಆಭರಣ ಕಳೆದುಕೊಂಡವರು.
‘ರಕ್ಷಾ ಬಂಧನ ಹಬ್ಬಕ್ಕಾಗಿ ನಾನು ಮತ್ತು ನನ್ನ ಮಗ ಇಬ್ಬರೂ ಗಂಡನ ಮನೆಯಾದ ಮಾಧ್ವಾರದಿಂದ ಯಾದಗಿರಿಗೆ ಅಲ್ಲಿಂದ ಬಸ್ನಲ್ಲಿ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ತಲುಪಿದೆ. ಲಾಲಗೇರಿ ಕ್ರಾಸ್ ಹತ್ತಿರದ ನನ್ನ ತಾಯಿ ಮನೆಗೆ ಹೋಗಲು ಆಟೊ ಹತ್ತಿದೆ. ನನ್ನ ಪಕ್ಕನೆ ಇಬ್ಬರು ಅಪರಿಚಿತ ಹೆಣ್ಣು ಮಕ್ಕಳು ಬಂದು ಕುಳಿತರು. ನಂತರ ಆಟೊ ಲಾಲಗೇರಿ ಕ್ರಾಸ್ ತಲುಪಿದಾಗ ಎಲ್ಲರೂ ಇಳಿದ ಹೋದೆವು. ರಾತ್ರಿ 9 ಗಂಟೆ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ತೆರೆದು ನೋಡಿದರೆ ಚಿನ್ನ–ಬೆಳ್ಳಿ ಆಭರಣಗಳು ಇರಲಿಲ್ಲ. 40 ಗ್ರಾಂ ಬಂಗಾರದ ತಾಳಿ ಚೈನ್, 10 ಗ್ರಾಂ ಬಂಗಾರದ 2 ಸುತ್ತುಂಗುರ, 10 ಗ್ರಾಂ ಬಂಗಾರದ ಒಂದು ಹರಳಿನ ಉಂಗುರ, 6 ಗ್ರಾಂ ಬಂಗಾರದ 2 ಕಿವಿಯೋಲೆ, 100 ಗ್ರಾಂ ಬೆಳ್ಳಿಯ ಕಾಲ ಖಡಗ, 50 ಗ್ರಾಂ ಬೆಳ್ಳಿಯ ಕಾಲ ಖಡಗ ಹೀಗೆ ಒಟ್ಟು 66 ಗ್ರಾಂ ಬಂಗಾರದ ಆಭರಣಗಳು ಹಾಗೂ 150 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು ₹ 4 ಲಕ್ಷ ಮೌಲ್ಯದ ಆಭರಣಗಳು ಕಳುವಾಗಿವೆ’ ಎಂದು ಕಾವೇರಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ; ಸಾವು
ಕಲಬುರಗಿ ತಾಲ್ಲೂಕಿನ ಸಾವಳಗಿ ಗ್ರಾಮದ ಸ್ಟೇಷನ್ ರೋಡ್ ಕ್ರಾಸ್ ಹತ್ತಿರ ವ್ಯಾನ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಚಾಲಕ ಮೃತಪಟ್ಟಿದ್ದು, ಬೈಕ್ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹುಣಸಿಹಡಗಿಲ ಗ್ರಾಮದ ಮಲ್ಲಿಕಾರ್ಜುನ ದಣ್ಣೂರ (30) ಮೃತರು. ಈ ಸಂಬಂಧ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ
ಕಲಬುರಗಿ: ನಗರದ ಮರಗಮ್ಮ ದೇವಸ್ಥಾನ ಹಿಂದಿನ ಖಾಲಿ ಜಾಗದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ಪೊಲೀಸರು, ಒಟ್ಟು ₹ 65 ಸಾವಿರ ಜಪ್ತಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ಎಂಟು ಮಂದಿ ವಿರುದ್ಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.