
ಕಲಬುರಗಿ: ಯಾದಗಿರಿ–ಕಲಬುರಗಿ ಜಿಲ್ಲಾ ತೋಟಗಾರಿಕೆ ಹುಟ್ಟುವಳಿ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸಂಘದ (ಹಾಪ್ಕಾಮ್ಸ್) ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.
ಒಟ್ಟು 17 ಸ್ಥಾನಗಳ ಪೈಕಿ 15 ಸ್ಥಾನಗಳಿಗೆ ಮೊದಲೇ ಅವಿರೋಧ ಆಯ್ಕೆ ನಡೆದಿತ್ತು. ಚಿಂಚೋಳಿ ಹಾಗೂ ಕಲಬುರಗಿಯ ‘ಎ’ ವರ್ಗದ ಸಾಮಾನ್ಯ ಕ್ಷೇತ್ರದ ಎರಡು ಸ್ಥಾನಗಳಿಗೆ ಮಾತ್ರವೇ ಚುನಾವಣೆ ನಡೆಯಿತು. ಒಟ್ಟು ಐವರು ಅಭ್ಯರ್ಥಿಗಳು ಕಣದಲ್ಲಿದ್ದರು. ಕಲಬುರಗಿ ಕ್ಷೇತ್ರದಲ್ಲಿ 146 ಹಾಗೂ ಚಿಂಚೋಳಿ ಕ್ಷೇತ್ರದಲ್ಲಿ 47 ಮತದಾರರಿದ್ದರು.
ಚಿಂಚೋಳಿ ಕ್ಷೇತ್ರದಿಂದ ಭವನರಾವ ಕುಪೇಂದ್ರರಾವ್ ಹಾಗೂ ಮಲ್ಲಿಕಾರ್ಜುನ ಭೂಶೆಟ್ಟಿ ಕಣದಲ್ಲಿದ್ದರು. ಮಲ್ಲಿಕಾರ್ಜುನ (26 ಮತ) ಅವರು 9 ಮತಗಳಿಂದ ಭವನರಾವ (17 ಮತ) ಅವರನ್ನು ಮಣಿಸಿ ಗೆದ್ದರು.
ಕಲಬುರಗಿ ಕ್ಷೇತ್ರದಿಂದ ಬಸವರಾಜ ಮಾಳದ, ರಾಜಕುಮಾರ ಕೋಟಿ ಹಾಗೂ ಸುರೇಶ ಬಸವರಾಜ ಕಣದಲ್ಲಿದ್ದರು. 77 ಮತಗಳನ್ನು ಪಡೆದ ರಾಜಕುಮಾರ ಗೆಲುವಿನ ನಗೆ ಬೀರಿದರು. ಇನ್ನುಳಿದಂತೆ ಬಸವರಾಜ 29 ಮತ ಹಾಗೂ ಸುರೇಶ ಬರೀ ಒಂದೇ ಮತಗಳಿಸಿ ಪರಾಭವಗೊಂಡರು.
ಚುನಾವಣಾ ಅಧಿಕಾರಿಯಾಗಿ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಸಂಜೀವಕುಮಾರ ಕಪೂರ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಪರಶುರಾಮ ಕಾರ್ಯನಿರ್ವಹಿಸಿದರು.
ಗೆದ್ದವರ ವಿವರ:
ಸಾಮಾನ್ಯ ‘ಎ’ ವರ್ಗ ಕ್ಷೇತ್ರದಲ್ಲಿ ಸೇಡಂನಿಂದ ಬಸವರಾಜ ಪಾಟೀಲ, ಆಳಂದದಿಂದ ಅಶೋಕ ಪಾಟೀಲ, ಚಿತ್ತಾಪುರದಿಂದ ಉಮಾರೆಡ್ಡಿ ಸಿದ್ರಾಮರೆಡ್ಡಿ, ಯಾದಗಿರಿಯಿಂದ ರಾಚಪ್ಪ ಚನ್ನಾರೆಡ್ಡಿ, ಶಹಾಪುರದಿಂದ ಮಲ್ಲಣ್ಣ ಸಾಹು, ಸುರಪುರದಿಂದ ವೆಂಕಟೇಶ ಗದವಾಲ, ಅಫಜಲಪುರದಿಂದ ಸಿದ್ದಣ್ಣ ಮಗಿ, ಜೇವರ್ಗಿಯಿಂದ ಚಂದ್ರಶೇಖರ ಅಮೃತರಾವ, ಕಲಬುರಗಿಯಿಂದ ರಾಜಕುಮಾರ ಗುರುಲಿಂಗಪ್ಪ, ಚಿಂಚೋಳಿಯಿಂದ ಮಲ್ಲಿಕಾರ್ಜುನ ಭೂಶೆಟ್ಟಿ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಹಿಂದುಳಿದ ‘ಆ’ ವರ್ಗ ಸ್ಥಾನಕ್ಕೆ ಸುರಪುರದ ಕೆ.ಎಸ್. ಸಜ್ಜನಶೆಟ್ಟಿ, ಹಿಂದುಳಿದ ‘ಬ’ ವರ್ಗದ ಸ್ಥಾನಕ್ಕೆ ಸೇಡಂನ ಹಣಮಂತರಾವ ಸಾಹು, ಪರಿಶಿಷ್ಟ ಜಾತಿ ಸ್ಥಾನಕ್ಕೆ ಕಲಬುರಗಿಯ ಸುಭಾಶ್ಚಂದ್ರ ಭೋವಿ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ತಿಪ್ಪಣ್ಣರೆಡ್ಡಿ ಲಚ್ಚಪ್ಪ ರೆಡ್ಡಿ, ಮಹಿಳಾ ಮೀಸಲು ಕ್ಷೇತ್ರದಿಂದ ಚಿಂಚೋಳಿಯ ಅಕ್ಷತಾ ಮಲ್ಲಿಕಾರ್ಜುನ, ಗುರುಮಠಕಲ್ನಿಂದ ಮಹಾಲಕ್ಷ್ಮಿ ಸಜ್ಜನ, ‘ಬಿ’ ವರ್ಗದ ಸಹಕಾರ ಸಂಘಗಳಿಂದ ಗುರುಶಾಂತ ಪಾಟೀಲ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.