ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಮುಸ್ಲಿಮರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು
ಜೇವರ್ಗಿ (ಕಲಬುರಗಿ ಜಿಲ್ಲೆ): ಇಸ್ಲಾಂ ಧರ್ಮದ ಪವಿತ್ರ ಸ್ಥಳಗಳಾದ ಮೆಕ್ಕಾ, ಮದೀನಾ ಮಸೀದಿ ಹಾಗೂ ಕಾಬಾಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪೋಸ್ಟ್ ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಆನಂದ ಗುತ್ತೇದಾರ (22 ವರ್ಷ) ಬಂಧಿತ ಆರೋಪಿ.
‘ಆರೋಪಿಯು ಇಸ್ಲಾಂ ಧರ್ಮದ ಪವಿತ್ರ ಸ್ಥಳ ಮೆಕ್ಕಾ, ಮದೀನಾ ಮತ್ತು ಕಾಬಾ ಮೇಲೆ ಬೂಟು ಧರಿಸಿದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಭಾವಚಿತ್ರ ನಿಲ್ಲಿಸಿ, ಕೈಯಲ್ಲಿ ಶ್ರೀರಾಮ ಸೇನೆಯ ಕೇಸರಿ ಧ್ವಜ ಹಿಡಿದಿರುವ ಚಿತ್ರ ಅಂಟಿಸಿದ್ದರು.
ಕೆಳಗೆ ಹಿಂದಿ ಭಾಷೆಯಲ್ಲಿ ‘ಸನಾತನಿ ಹೋ ತೋ ಕಮೆಂಟ್ ಮೆ ಲಿಕೋ ಜೈ ಶ್ರೀರಾಮ’ ಅಂತ ಬರೆದಿದ್ದರು. ಜೊತೆಗೆ ಭಗವಾಧ್ವಜ, ರಾಮ ಮಂದಿರ, ತ್ರಿಶೂಲ ಹಾಗೂ ಓಂ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು’ ಎಂದು ಆರೋಪಿಸಿ ಸೈಯದ್ ಪಟೇಲ್ ಕಾಲೇಗೌಡಾ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು.
ಅದರನ್ವಯ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಇದಕ್ಕೂ ಮುನ್ನ ಇಸ್ಲಾಂ ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಅಪಮಾನ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮುಸ್ಲಿಮರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.