ಕಾಳಗಿ: ‘ಪಟ್ಟಣದ ಐತಿಹಾಸಿಕ ದೇವಸ್ಥಾನ ನೀಲಕಂಠ ಕಾಳೇಶ್ವರ ಗರ್ಭಗುಡಿ ಮತ್ತು ಇಡೀ ಆವರಣ ಶಿಥಿಲಗೊಂಡಿದ್ದು ದುರಸ್ತಿ ಕಾರ್ಯ ಕೈಗೊಳ್ಳಲು ವಿಶೇಷ ಅನುದಾನ ಮಂಜೂರು ಮಾಡಬೇಕು’ ಎಂದು ದೇವಸ್ಥಾನದ ಪ್ರಮುಖರು ಬುಧವಾರ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ನಿಯೋಗ, ‘ನೀಲಕಂಠ ಕಾಳೇಶ್ವರ ಗರ್ಭಗುಡಿ ಮತ್ತು ಆವರಣ ಬಹಳಷ್ಟು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ಪೂಜೆ, ಸ್ಮರಣೆ, ಪ್ರಾರ್ಥನೆಗೆ ಬರುವ ಅಪಾರ ಭಕ್ತರು ಭೀತರಾಗುತ್ತಿದ್ದಾರೆ. ಗರ್ಭಗುಡಿಯ ದುರಸ್ತಿ ಕಾರ್ಯವನ್ನು ಅತಿ ಶೀಘ್ರದಲ್ಲಿ ಕೈಗೊಳ್ಳಬೇಕಾಗಿದ್ದು ತಮ್ಮ ಇಲಾಖೆಯಡಿ ಅಥವಾ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಅವರನ್ನು ಭೇಟಿ ಮಾಡಿದ ಪ್ರಮುಖರು, ‘ನೀಲಕಂಠ ಕಾಳೇಶ್ವರ ದೇವಸ್ಥಾನ ಹಿಂಬದಿಯ ಬ್ರಿಡ್ಜ್ ಕಂ ಬ್ಯಾರೇಜ್ ಕೆಳಭಾಗದ ಹೊಲಗದ್ದೆಗಳ ಕಾಲುವೆ ಹಾಳಾಗಿದನ್ನು ಪುನರ್ ನಿರ್ಮಿಸಬೇಕು. ಇಲ್ಲಿಂದ ಮಲಘಾಣ ಸಮೀಪದ ಸಂಗಮನಾಥ ಲಿಂಗದವರೆಗೆ ರಸ್ತೆ ನಿರ್ಮಿಸಿ ಭಕ್ತರಿಗೆ, ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮರಾವ ತೇಗಲತಿಪ್ಪಿ, ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ವಿಶ್ವನಾಥ ವನಮಾಲಿ, ಬಸ್ಸಯ್ಯ ಪ್ಯಾಟಿಮಠ, ಸಂತೋಷ ಪತಂಗೆ, ಬಾಬು ನಾಟೀಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.