ADVERTISEMENT

ಕಲಬುರ್ಗಿ: ಪಿಎಸ್ಐ ‌ಅಮಾನತು ಭರವಸೆ, ತಡರಾತ್ರಿ‌ ಧರಣಿ ವಾಪಸ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 4:08 IST
Last Updated 4 ಜನವರಿ 2021, 4:08 IST

ಕಲಬುರ್ಗಿ: ಮೂರು ವರ್ಷದ ಬಾಲಕಿ ಸಾವಿನ ಪ್ರಕರಣಕ್ಕೆ ‌ಸಂಬಂಧಿಸಿದಂತೆ‌ ಜೇವರ್ಗಿ ಪಿಎಸ್ಐ ಅವರನ್ನು ‌ಅಮಾನತು ಮಾಡಬೇಕು‌ ಎಂದು ಒತ್ತಾಯಿಸಿ ‌ರಾತ್ರಿಯಿಡೀ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದ ಕಾಂಗ್ರೆಸ್ ನಾಯಕರು ಹಾಗೂ ಕೋಲಿ ಸಮಾಜದ ಮುಖಂಡರು ತಡರಾತ್ರಿ ಪ್ರತಿಭಟನೆ ವಾಪಸ್ ‌ಪಡೆದಿದ್ದಾರೆ.

ಭಾನುವಾರ ರಾತ್ರಿ ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ ‌ಹಾಗೂ ಎಸ್‌ಪಿ ‌ಡಾ. ಸಿಮಿ ಮರಿಯಮ್ ಜಾರ್ಜ್ ಅವರು ಮನವೊಲಿಸಲು ‌ಮುಂದಾದರೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ‌ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹಾಗೂ ಸಮಾಜದ ಮುಖಂಡರು ಮಣಿದಿರಲಿಲ್ಲ. ಪಿಎಸ್ಐ ಅಮಾನತು ಮಾಡದೇ ಬೇರೆ ಮಾರ್ಗವೇ ಇಲ್ಲ ಎಂದು ಪಟ್ಟು ಹಿಡಿದಿದ್ದರು.

ತಡರಾತ್ರಿ ಪ್ರತಿಭಟನಾಕಾರರು ‌ಜಿಮ್ಸ್ ವೃತ್ತದಲ್ಲಿಯೇ ರಾತ್ರಿ ಕಳೆಯಲು ‌ಸಿದ್ಧತೆ ಮಾಡಿಕೊಂಡಿದ್ದರು.

ADVERTISEMENT

ತಡರಾತ್ರಿ ‌ಫೋನ್ ಕರೆ ಮಾಡಿದ ಗೃಹಸಚಿವ ಬಸವರಾಜ ‌ಬೊಮ್ಮಾಯಿ ಪಿಎಸ್ಐ ಅಮಾನತಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ‌ನೀಡಿದರು. ಆ ಭರವಸೆ ಮೇರೆಗೆ ಪ್ರತಿಭಟನೆ ‌ಹಿಂದಕ್ಕೆ ಪಡೆದು ಮಗುವಿನ ಅಂತ್ಯಕ್ರಿಯೆ ನಡೆಸಲು ಜೈನಾಪುರಕ್ಕೆ ಕೊಂಡೊಯ್ದರು.

ಶಾಸಕಿ‌ ಖನೀಜ್ ಫಾತಿಮಾ, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಮಾಜಿ ಶಾಸಕ ಬಿ.ಆರ್. ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯರಾದ ತಿಪ್ಪಣ್ಣಪ್ಪ‌ ಕಮಕನೂರ, ಅಲ್ಲಮಪ್ರಭು ಪಾಟೀಲ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.