ADVERTISEMENT

ಕಮಲಾಪುರ: 20,178 ಹೆಕ್ಟೇರ್‌ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 5:06 IST
Last Updated 27 ಅಕ್ಟೋಬರ್ 2025, 5:06 IST
ಕಮಲಾಪುರ ತಾಲ್ಲೂಕಿನ ಬೆಳಕೋಟಾ ಗ್ರಾಮದಲ್ಲಿ ಅತ್ಯಧಿಕ ಮಳೆಯಿಂದ ಹೊಲದಲ್ಲಿ ನೀರು ಜಿನುಗುತ್ತಿರುವುದು
ಕಮಲಾಪುರ ತಾಲ್ಲೂಕಿನ ಬೆಳಕೋಟಾ ಗ್ರಾಮದಲ್ಲಿ ಅತ್ಯಧಿಕ ಮಳೆಯಿಂದ ಹೊಲದಲ್ಲಿ ನೀರು ಜಿನುಗುತ್ತಿರುವುದು   

ಕಮಲಾಪುರ: ತಾಲ್ಲೂಕಿನಲ್ಲಿ ಈ ವರ್ಷ 40 ಸಾವಿರ ಹೆಕ್ಟೇರ್‌ ಮುಂಗಾರು ಬಿತ್ತನೆಯಾಗಿದ್ದು, ನಿರಂತರ ಸುರಿದ ಭಾರಿ ಮಳೆಗೆ 20,178 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ತೊಗರಿ, ಉದ್ದು, ಹೆಸರು, ಸೋಯಾ ಸೇರಿದಂತೆ ಅಲ್ಪ ಪ್ರಮಾಣದಲ್ಲಿ ಕಬ್ಬು ಹಾನಿಯಾಗಿದ್ದು, ಈ ಕುರಿತು ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ.

ತೊಗರಿ 17,000 ಹೆಕ್ಟೇರ್‌, ಸೋಯಾ 1,172 ಹೆಕ್ಟರ್‌, ಹೆಸರು 1,200 ಹೆಕ್ಟೇರ್‌, ಉದ್ದು 800 ಹೆಕ್ಟೇರ್‌ ಹಾಗೂ ಕಬ್ಬು 13 ಹೆಕ್ಟೇರ್‌ ಹಾನಿಯಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 28 ಸಾವಿರ ಫ್ರೂಟ್ಸ್‌ ಐಡಿ ಹೊಂದಿರುವ ರೈತರಿದ್ದಾರೆ. ಇದುವರೆಗೆ 22,500 ರೈತರ 16 ಸಾವಿರ ಹೆಕ್ಟರ್‌ ಪ್ರದೇಶದ ಬೆಳೆ ಹಾನಿ ದತ್ತಾಂಶವನ್ನು ಬೆಳೆ ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದೆ. ಹೀಗಾಗಿ ಶೇ 76 ರಷ್ಟು ರೈತರ ಬೆಳೆಹಾನಿ ದತ್ತಾಂಶ ನೋಂದಣಿ ಕಾರ್ಯ ಮುಗಿದಿದೆ. ಇನ್ನು 1500 ರೈತರ ಬೆಳೆ ಪರಿಹಾರ ನೋಂದಣಿ ಕಾರ್ಯ ಜಾರಿಯಲ್ಲಿದೆ.

ಇನ್ನುಳಿದ ನಾಲ್ಕು ಸಾವಿರ ಎಫ್‌ಐಡಿಯಲ್ಲಿ, ಕಬ್ಬು ಬೆಳೆಗಾರರು, ಬೀಳು ಜಮೀನು, ಪಟ್ಟೇದಾರ ಮೃತಪಟ್ಟವರು ಎರಡು ಸಾವಿರ ಇದ್ದಾರೆ. ಜೊತೆಗೆ ಜಮೀನಿಲ್ಲದ ಹೈನುಗಾರರ ಎರಡು ಸಾವಿರ ಎಫ್‌ಐಡಿಗಳಿವೆ. ಈ ನಾಲ್ಕು ಸಾವಿರ ಎಫ್‌ಐಡಿ ಹೊಂದಿದವರಿಗೆ ಪರಿಹಾರ ಒದಗಿಸಲಾಗುವುದಿಲ್ಲ.

ನಾಲ್ಕು ಸಾವಿರ ರೈತರ ಎಫ್‌ಐಡಿ ಇಲ್ಲ: ತಾಲ್ಲೂಕಿನಲ್ಲಿ ನಾಲ್ಕು ಸಾವಿರ ರೈತರ ಎಫ್‌ಐಡಿ ಎಫ್‌ಐಡಿ ಹೊಂದಿಲ್ಲ. ಇದರಲ್ಲಿ ಈಗಾಗಲೇ 1500 ರೈತರ ಎಫ್‌ಐಡಿ ಮಾಡಲಾಗಿದೆ. ಜಮೀನಿನ ಪಟ್ಟೆದಾರರು ಮೃತಪಟ್ಟಿರುವುದು, ಗುಳೆ ಹೋಗಿರುವವರು ಸೇರಿದಂತೆ ಎಫ್‌ಐಡಿ ಮಾಡಿಸಲು ಸಂಪೂರ್ಣ ನಿರಾಸಕ್ತಿ ತೋರಿಸುತ್ತಿರುವ ಕಾರಣ 3500 ಜನ ರೈತರ ಎಫ್‌ಐಡಿ ನೋಂದಣೀ ಬಾಕಿ ಉಳಿದಿದೆ. ತಾಲ್ಲೂಕಿನಲ್ಲಿ ಹಾನಿಯಾದ 20,178 ಹೆಕ್ಟರ್‌ನಲ್ಲಿ ಸುಮಾರು 17 ಸಾವಿರ ಹೆಕ್ಟರ್‌ಗೆ ‍‍ಪರಿಹಾರ ಬರುವುದು ನಿಶ್ಚಿತ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯಂತೆ ಪರಿಹಾರ ಒದಗಿಸಲಾಗುವುದು ಎಂದು ತಹಶೀಲ್ದಾರ್‌ ಮೊಹಮ್ಮದ ಮೋಸೀನ್ ಅಹಮ್ಮದ ತಿಳಿಸಿದರು.

ಹೆಸರು ಉದ್ದು ಸಂಪೂರ್ಣ ಹಾನಿಯಾಗಿದ್ದು ರೈತರ ಕೈಯಲ್ಲಿ ದುಡ್ಡಿಲ್ಲ. ಸಾಲದ ಸೂಲದಲ್ಲಿ ಮುಳುಗುವ ಮುನ್ನ ಸರ್ಕಾರ ಬೆಳೆ ಹಾನಿ ಪರಿಹಾರ ಒದಗಿಸಬೇಕು
ಬಸವರಾಜ ಮತ್ತಿಮಡು ಶಾಸಕ

ಎಫ್‌ಐಡಿ ಕಡ್ಡಾಯ

‘ಎಫ್‌ಐಡಿ ಇಲ್ಲದ ರೈತರು ಕೂಡಲೇ ಎಫ್‌ಐಡಿ ಮಾಡಿಸಿಕೊಳ್ಳಬೇಕು. ರೈತ ಸಂಪರ್ಕ ಕೇಂದ್ರ ಗ್ರಾಮ ಒನ್‌ ಕೇಂದ್ರ ತಹಶೀಲ್ದಾರ ಕಚೇರಿ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ವಿವಿಧೆಡೆ ಎಫ್‌ಐಡಿ ಜನರೇಟ್‌ ಮಾಡಲು ಲಾಗಿನ್‌ ನೀಡಲಾಗಿದೆ. ಇವರಲ್ಲಿ ಯಾರ ಬಳಿಗಾದರೂ ತೆರಳಿ ಎಫ್‌ಐಡಿ ಮಾಡಿಸಿಕೊಳ್ಳಬೇಕು. ಒಬ್ಬ ರೈತ ಎಲ್ಲಾದರೂ ಎಷ್ಟಾದರೂ ಜಮೀನು ಹೊಂದಿದ್ದರೂ ಒಂದೇ ಎಫ್‌ಐಡಿ ಮಾಡಲಾಗುತ್ತದೆ’ ಎಂದು ತಹಶೀಲ್ದಾರ್‌ ಮೊಹಮ್ಮದ್‌ ಮೋಸೀನ್‌ ಅಹಮ್ಮದ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.