ಚಿತ್ತಾಪುರ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಕಾಂಗ್ರೆಸ್ಸಿನವರೇ ಸೋಲಿಸು ತ್ತಾರೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಬೂತ್ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸ್ತುತ ಕಾಂಗ್ರೆಸ್ ರಾಜಕಾರಣ ಗಮನಿಸಿದರೆ ಅಲ್ಲಿ ಒಗ್ಗಟ್ಟಿಲ್ಲ. ಪರಸ್ಪರ ಸೋಲಿಸಲು ಹವಣಿಸುತ್ತಿದ್ದಾರೆ. ಚುನಾವಣೆಗಿಂತ ಮುಂಚೆಯೆ ಮುಖ್ಯಮಂತ್ರಿ ಆಗಲು ನಾಮುಂದು ತಾಮುಂದು ಎನ್ನುವ ಪೈಪೋಟಿಗಿಳಿದಿದ್ದಾರೆ ಎಂದರು.
ಚಿತ್ತಾಪುರದಲ್ಲಿ ಬಿಜೆಪಿ ಗೆಲುವು ಖಚಿತ: ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಈ ಒಂದು ತಿಂಗಳಲ್ಲಿ ಜಿಲ್ಲೆಗೆ ಆರು ಸಲ ಬಂದಿದ್ದೇನೆ. ಈ ಕ್ಷೇತ್ರದ ಶಾಸಕ ಎಷ್ಟು ಸಲ ಬಂದಿದ್ದಾರೆ ಎಂದು ಹೇಳಿ?. ಶಾಸಕರ ಈ ನಡೆ ಗಮನಿಸಿದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದರು.
ಸಚಿವರ ಎದುರೇ ಕಾರ್ಯಕರ್ತರ ಆಕ್ರೋಶ: ಸಾಮಾನ್ಯ ಕಾರ್ಯಕರ್ತರ ಮಾತಿಗೆ ಬೆಲೆ ಇಲ್ಲ. ಸಮಸ್ಯೆಗಳಿಗೆ ಯಾರೂ ಸ್ಪಂದನೆ ಮಾಡುತ್ತಿಲ್ಲ. ಜಿಲ್ಲೆಯವರಂತೂ ಯಾರೂ ನಮ್ಮ ಗೋಳು ಕೇಳುವುದೇ ಇಲ್ಲ. ನೀವೇನು ಬರುತ್ತೀರಿ, ಏನಾದರೂ ಹೇಳಿ ಹೋಗುತ್ತೀರಿ, ನಮ್ಮ ಗತಿಯೇನು ಎಂದು ಕೆಲವು ಬಿಜೆಪಿ ಕಾರ್ಯಕರ್ತರು ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಎದುರಲ್ಲೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್, ಜಿಲ್ಲಾ ಒಬಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ನೀಲಕಂಠ ಪಾಟೀಲ್, ಧರ್ಮಣ್ಣ ಇಟಗಾ, ಶಶಿಕಲಾ ತೆಂಗಳಿ, ರವೀಂದ್ರ ಸಜ್ಜನಶೆಟ್ಟಿ, ವಿಠಲ್ ವಾಲ್ಮೀಕಿ ನಾಯಕ, ಅರವಿಂದ ಚವಾಣ್, ಶಂಕರ ಚವಾಣ್, ರಾಮದಾಸ, ನಾಗರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.