
ಯಡ್ರಾಮಿ: ‘ಧರ್ಮದ ಜಾಗೃತಿ ಹಾಗೂ ನಮ್ಮ ಸಂಸ್ಕೃತಿ ರಕ್ಷಣೆ ಸಾಧು ಸಂತರು, ಜಗದ್ಗುರುಗಳು ಪುರಾತನ ಕಾಲದಿಂದಲ್ಲೂ ಮಾಡುತ್ತಾ ಬಂದಿದ್ದಾರೆ’ ಎಂದು ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೋನಸಿರಸಗಿಯ ಸವಳಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವೇಕ ಚಿಂತಾಮಣಿ ಮಹಾರಾಜರು ಲೋಕ ಕಲ್ಯಾಣಕ್ಕಾಗಿ ಆರು ತಿಂಗಳು ಹನ್ನೊಂದು ದಿನಗಳ ಪರ್ಯಂತ ನಡೆಸಿದ ಉಪವಾಸ ಹಾಗೂ ಮೌನ ಅನುಷ್ಠಾನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹಿಮಾಲಯದಲ್ಲಿ ನಾಗಾ ಸಾಧುಗಳು ಕೊರೆವ ಚಳಿಯನ್ನು ಲೆಕ್ಕಿಸದೆ ಲೋಕ ಕಲ್ಯಾಣಕ್ಕಾಗಿ ತಪಸ್ಸು, ಅನುಷ್ಠಾನ ಮಾಡುತ್ತಿದಾರೆ. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಹೋರಾಡಲು ತಮಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಕೋರಿದ್ದರು’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವೇಕ ಚಿಂತಾಮಣಿ ಮಹಾರಾಜರು, ಮಾಗಣಗೇರಾದ ವಿಶ್ವಾರಾಧ್ಯ ಶಿವಾಚಾರ್ಯ, ಆಂದೋಲ ಸಿದ್ದಲಿಂಗ ಸ್ವಾಮೀಜಿ, ಕಡಕೋಳದ ರುದ್ರಮುನಿ ಶಿವಾಚಾರ್ಯ, ಅಂದೇವಾಡದ ಜ್ಞಾನಸಿಂಧೂ ಮಹಾರಾಜರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ ಸಜ್ಜನ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಪ್ರಮುಖರಾದ ರಮೇಶಬಾಬು ವಕೀಲ, ಚಂದ್ರಶೇಖರ ಪುರಾಣಿಕ, ಶೋಭಾ ಬಾಣಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಅಡ್ಡಪಲ್ಲಕ್ಕಿ ಉತ್ಸವ: ಪ್ರಮುಖ ಬೀದಿಗಳಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ವಿವೇಕ ಚಿಂತಾಮಣಿ ಶ್ರೀಗಳಿಗೆ ತುಲಾಭಾರ ಹಾಗೂ ಎರಡು ಜೋಡಿಗಳ ಸಾಮೂಹಿಕ ವಿವಾಹ ಜರುಗಿತು. ಬುಧವಾರ ನಡೆದ ದೇವಿ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ದೇವಿಯ ತೊಟ್ಟಿಲನ್ನು ಕೋನಸಿರಸಗಿಯ ಭಕ್ತ ಸಿದ್ದಣ್ಣ ಕುಕನೂರ ಹರಾಜಿನಲ್ಲಿ ₹4.51 ಲಕ್ಷ ನೀಡಿ ತೆಗೆದುಕೊಳ್ಳುವ ಮೂಲಕ ಭಕ್ತಿ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.