
ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸಿದ್ದನೂರು ಮತ್ತು ಅಂಕಲಗಿ ಗ್ರಾಮಗಳಿಂದ ಪಟ್ಟಣಕ್ಕೆ ಬರಲು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಲಭ್ಯಗಳಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇದರಿಂದ ಶಾಲಾ-ಕಾಲೇಜು, ಕಚೇರಿ ಕೆಲಸಗಳು, ಕೂಲಿಕಾರ್ಮಿಕರು,ನೌಕರರು ಸೇರಿದಂತೆ ವಿವಿಧ ಕಾರ್ಯಗಳ ನಿಮಿತ್ತ ಗ್ರಾಮೀಣ ಪ್ರದೇಶಗಳಿಂದ ನಿತ್ಯ ಬೆಳಂಬೆಳಿಗ್ಗೆಯೇ ಅಫಜಲಪುರಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಬಸ್ ಗಳ ಕೊರತೆ ಎದುರಾಗುತ್ತಿದೆ.
ಸಿದ್ದನೂರು, ಅಂಕಲಗಾ, ಬೋಗನಹಳ್ಳಿಗಳಿಗೆ ಅಫಜಲಪುರದಿಂದ ನೀಲೂರಿಗೆ ಹೋಗುವ ಬಸ್ಸೇ ಆಧಾರ. ಬಸ್ ನವರರು ಟ್ರಿಪ್ ಗಳ ಲೆಕ್ಕದಲ್ಲಿ ಓಡಿಸುತ್ತಾರೆ. ಇದರಿಂದ ಬಸಗಳು ಕೆಲವೊಮ್ಮೆ ನಿಗದಿತ ಸಮಯಕ್ಕೂ ಮೊದಲೇ ಹೋಗಿ ಬಿಡುತ್ತವೆ. ಮತ್ತೆ ಕೆಲವೊಮ್ಮೆ ತಡವಾಗಿ ಬರುತ್ತವೆ. ಇದರಿಂದ ಒಂದೆಡೆ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ತಲುಪಬೇಕಾದ ಊರುಗಳಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಮತ್ತೊಂದೆಡೆ ಹಿಂದಿನ ಬಸ್ಸುಗಳು ತುಂಬಿ ತುಂಬಿ ತುಳುಕುವಂತಾಗುತ್ತಿದೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಸ್ ಓಡಿಸಲು ಕ್ರಮವಹಿಸಬೇಕು ಎಂದು ಸಿದ್ದನೂರು ಗ್ರಾಮದ ಯುವಕ ಮೆಹಬೂಬ ನದಾಫ್ ಆಗ್ರಹಿಸಿದ್ದಾರೆ.
ಕೆಕೆಆರ್ಟಿಸಿ ಅಧ್ಯಕ್ಷರಾಗಿ ನಿಯೋಜಿತಗೊಂಡಿರುವ ಅರುಣಕುಮಾರ ಪಾಟೀಲ ಅವರು ಶುಕ್ರವಾರ ಕಲಬುರಗಿಯಲ್ಲಿ ಅಧಿಕಾರವಹಿಸಿಕೊಳ್ಳಲಿದ್ದು, ಅಫಜಲಪುರ ತಾಲ್ಲೂಕಿನ ಗ್ರಾಮೀಣ ಭಾಗದ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಬಸ್ ಓಡಿಸಲು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.