ಆಳಂದ: ‘ತಾಲ್ಲೂಕಿನ ಮಟಕಿ ಗ್ರಾಮಸ್ಥರು ಕೆರೆಯ ಅಪಾಯದ ಮೂನ್ಸೂಚನೆ ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಕೆರೆ ಸಂಪೂರ್ಣ ಒಡೆದು ಅಪಾರ ಹಾನಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಆಪಾದಿಸಿದರು.
‘ತಾಲ್ಲೂಕಿನ ಮಟಕಿ ಗ್ರಾಮದ ಒಡೆದ ಕೆರೆಯ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಸಂತ್ರಸ್ತ ರೈತರೊಂದಿಗೆ ಮಾತನಾಡಿದ ಅವರು, ಮಟಕಿ ಕೆರೆ ಒಡೆದ ಪರಿಣಾಮ ಮಟಕಿ, ಹೆಬಳಿ, ಜೀರಹಳ್ಳಿ, ಶಕಾಪುರ ಗ್ರಾಮ ವ್ಯಾಪ್ತಿಯ ರೈತರ ಬೆಳೆ, ಹೊಲಬಾವಿ ಗ್ರಾಮಗಳ ಬದುಗಳು ಸಂಪೂರ್ಣ ಹಾಳಾಗಿವೆ. ಮಟಕಿ ಗ್ರಾಮದಲ್ಲಿ ನೀರು ನುಗ್ಗಿದೆ. ತಾಲ್ಲೂಕು ಆಡಳಿತವು ತುರ್ತು ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಇಂತಹ ಅನಾಹುತ ಎದುರಿಸುವಂತಾಗಿದೆ. ಇಲ್ಲಿ ಶಾಸಕ ಸುಭಾಷ ಗುತ್ತೇದಾರ ವೈಪಲ್ಯ ಎದ್ದುಕಾಣುತ್ತಿದೆ’ ಎಂದರು.
ಗ್ರಾಮದ ಮುಖಂಡ ಸುಭಾಷ ಪಾಟೀಲ, ಸುನೀಲ ತಡಕಲ, ಲಿಂಗರಾಜ ಜಾನೆ, ದತ್ತಾತ್ರೇಯ ಬಿರಾದಾರ, ಲಿಂಗರಾಜ ಗಂಭಿರೆ ಇದ್ದರು. ನಂತರ ಖಂಡಾಳ ಗ್ರಾಮದಲ್ಲಿ ಭಾರಿ ಮಳೆಗೆ ಬಿರುಕು ಬಿಟ್ಟಿರುವ ಸಣ್ಣ ಕೆರೆ, ಹೊಲಗಳಿಗೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.