ADVERTISEMENT

ಚಿತ್ತಾಪುರ: ಸರ್ಕಾರಿ ಜಮೀನು ಕಬಳಿಕೆ ತನಿಖೆಯಿಂದ ದೃಢ

ಸೇಡಂ ಉಪ ವಿಭಾಗಾಧಿಕಾರಿಗೆ ತಹಶೀಲ್ದಾರ್ ವರದಿ

​ಪ್ರಜಾವಾಣಿ ವಾರ್ತೆ
Published 12 ಮೇ 2020, 9:33 IST
Last Updated 12 ಮೇ 2020, 9:33 IST
ಉಮಾಕಾಂತ ಹಳ್ಳೆ
ಉಮಾಕಾಂತ ಹಳ್ಳೆ   

ಚಿತ್ತಾಪುರ: ತಾಲ್ಲೂಕಿನ ಇಟಗಾ ಗ್ರಾಮದ ಸರ್ಕಾರಿ ಸರ್ವೆ ನಂ174/1 ರಲ್ಲಿ 4 ಎಕರೆ 38 ಗುಂಟೆ ಹಾಗೂ 174/11 ರಲ್ಲಿ 2 ಎಕರೆ ಸೇರಿ ಒಟ್ಟು 6 ಎಕೆರೆ 38 ಗುಂಟೆ ಜಮೀನನ್ನು ಅದೇ ಗ್ರಾಮದ ಮಹಾದೇವಿ ನಾಗೇಂದ್ರಪ್ಪ ಡಿಗ್ಗಿ ಅವರು ಕಬಳಿಸಿದ್ದಾರೆ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಸೇಡಂ ಉಪ ವಿಭಾಗಾಧಿಕಾರಿಗೆ ಈಚೆಗೆ ವರದಿ ಸಲ್ಲಿಸಿದ್ದಾರೆ.

ಪ್ರಕರಣದ ವಿವರ: ಈ ಜಮೀನನ್ನು ಮಹಾದೇವಿ ನಾಗಿಂದ್ರ ಡಿಗ್ಗಿ ಅವರು ಅಕ್ರಮವಾಗಿ ಪಹಣಿ ಪತ್ರಿಕೆಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡು ಕಬಳಿಸಿದ್ದಾರೆ. ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಅದೇ ಗ್ರಾಮದ ತಮ್ಮಣ್ಣ ವಿಠಲ್ ಡಿಗ್ಗಿ ಅವರು 2019 ರಲ್ಲಿ ಜಿಲ್ಲಾಧಿಕಾರಿ ಮತ್ತು ಸೇಡಂ ಉಪ ವಿಭಾಗಾಧಿಕಾರಿಗೆ ದೂರು ಸಲ್ಲಿಸಿದ್ದರು.

ಪಂಚನಾಮೆ ವರದಿ: ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೇಡಂ ಉಪ ವಿಭಾಗಾಧಿಕಾರಿ ಜುಲೈ 5,2019 ರಂದು ತಹಶೀಲ್ದಾರ್ ಅವರಿಗೆ ಸೂಚಿಸಿದ್ದರು. ದಾಖಲೆ ಪರಿಶೀಲನೆ, ಸ್ಥಳ ಪರಿಶೀಲನೆಯ ಪಂಚನಾಮೆ ವರದಿ ನಿಡುವಂತೆ ತಹಶೀಲ್ದಾರ್ ಅವರು ಕಂದಾಯ ನಿರೀಕ್ಷಕರಿಗೆ ಆದೇಶ ಮಾಡಿದ್ದರು.

ADVERTISEMENT

ಅನಧಿಕೃತವಾಗಿ ಪಹಣಿ ಪತ್ರಿಕೆಯಲ್ಲಿ ಹೆಸರು ಸೇರಿಸಿರುವುದು ಭೂ ದಾಖಲೆಗಳಿಂದ ಕಂಡು ಬಂದಿದೆ ಎಂದು ತಹಶೀಲ್ದಾರ್ ಅವರು ದಾಖಲೆಪತ್ರ ಪರಿಶೀಲಿಸಿ ಹಾಗೂ ವಿಚಾರಣೆ ನಡೆಸಿ ಉಪ ವಿಭಾಗಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಅನುಮತಿ ಕೊರಿಕೆ: ಸರ್ಕಾರಿ ಜಮೀನನ್ನು ಯಾವುದೇ ಮಂಜೂರಾತಿ ಆದೇಶವಿಲ್ಲದೆ ಅಂದಿನ ಗ್ರಾಮ ಲೆಕ್ಕಾಧಿಕಾರಿ ಸುಭಾಷ್ ಪಾಟೀಲ್ ಅವರು ಅನಧಿಕೃತವಾಗಿ ಪಹಣಿಯಲ್ಲಿ ನಮೂದು ಮಾಡಿರುವುದು ಕಂಡು ಬಂದಿದೆ. ಅವರ ವಿರುದ್ಧ ಹಾಗೂ ಅನಧಿಕೃತವಾಗಿ ಪಹಣಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಿಕೊಂಡಿರುವ ಮಹಾದೇವಿ ನಾಗೀಂದ್ರ ಡಿಗ್ಗಿ ಅವರ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ತಿದ್ದುಪಡಿ ಕಾಯ್ದೆ ಕಲಂ 192(ಎ), 192(ಬಿ), 192(ಡಿ) ಪ್ರಕಾರ ಹಾಗೂ ಭಾರತೀಯ ದಂಡ ಸಂಹಿತೆ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಹಾಗೂ ಜಮೀನನ್ನು ಕರ್ನಾಟಕ ಸರ್ಕಾರದ್ದು ಎಂದು ನಮೂದಿಸಲು ಆದೇಶ ನೀಡಬೇಕು ಎಂದು ತಹಶೀಲ್ದಾರ್ ಅವರು ವರದಿಯಲ್ಲಿ ಸೇಡಂ ಉಪ ವಿಭಾಗಾಧಿಕಾರಿಗೆ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.