ಕಲಬುರಗಿ: ‘ಕಲ್ಯಾಣ ಕರ್ನಾಟಕದ ಇತಿಹಾಸ ಹಾಗೂ ಇದರ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಬಗ್ಗೆ ನಾವು ತಿಳಿದುಕೊಳ್ಳಬೇಕು’ ಎಂದು ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಪ್ರಾಂಶುಪಾಲ ಡಾ.ಶಂಕ್ರೆಪ್ಪ ಹತ್ತಿ ಹೇಳಿದರು.
ಮಹಾವಿದ್ಯಾಲಯದಲ್ಲಿ ಕೇಂದ್ರ ಪ್ರಸಾರ ಸಚಿವಾಲಯದ ಸಂವಹನ ಕೇಂದ್ರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತು ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಹೈದರಾಬಾದ್ ಕರ್ನಾಟಕವು ಎಷ್ಟೊಂದು ಸಂಪದ್ಭರಿತವಾಗಿತ್ತು ಎಂದರೆ, ಬೇರೆ ಯಾವ ಸಂಸ್ಥಾನದಲ್ಲೂ ಇಂತಹ ಸಂಪತ್ತು ಇರಲಿಲ್ಲ. ಆದರೆ ಸರಿಯಾದ ಸದ್ಭಳಕೆಯಾಗಿದ್ದರೆ ಇಂದು ಹಿಂದುಳಿದ ಜಿಲ್ಲೆಗಳು ಎನ್ನುವ ಹಣೆಪಟ್ಟಿ ಸಿಗುತ್ತಿರಲಿಲ್ಲ. ಇವತ್ತಿನ ದಿನಮಾನಗಳಲ್ಲಿ ಒಡೆದು ಅಳುವ ನೀತಿಯನ್ನು ತರುವುದು ಬೇಡ, ನಾವೆಲ್ಲರೂ ಒಂದು ಎನ್ನು ಭಾವನೆಯಿಂದ ಹಿಂದುಳಿದ ಹಣೆಪಟ್ಟಿಯನ್ನು ಹೋಗಲಾಡಿಸಬೇಕು’ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳ್ಳಾರಿ ಕೇಂದ್ರ ಸಂವಹನ ಇಲಾಖೆ ಉಪ ನಿರ್ದೇಶಕ ಡಾ. ಜಿ.ಡಿ.ಹಳ್ಳಿಕೇರಿ, ‘ಕಲ್ಯಾಣ ಕರ್ನಾಟಕದ ಇತಿಹಾಸದ ಹಾಗೂ ಸ್ವಾತಂತ್ರ್ಯದ ಮಜುಲುಗಳ ಕುರಿತು ನಿಮ್ಮೆಲ್ಲರಿಗೂ ಅರಿವು ಮೂಡಿಸಬೇಕು ಎಂಬುದು ಕೇಂದ್ರದ ಆಸೆಯಾಗಿದೆ. ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಪ್ರದರ್ಶಿಸುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮಜುಲು, ಹಂತಗಳು ಕುರಿತಾಗಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಒಂದು ಸೆಲ್ಫಿ ಬೂತ್ ಇಡಲಾಗಿದ್ದು, ಅಲ್ಲಿ ಪೋಟೊ ತೆಗೆದುಕೊಂಡು ಟ್ವೀಟ್ ಮಾಡಿರಿ’ ಎಂದು ಮನವಿ ಮಾಡಿದರು.
ವಿಶೇಷ ಉಪನ್ಯಾಸ ನೀಡಿದ ಡಾ.ಶಂಭುಲಿಂಗ ಎಸ್.ವಾಣಿ, ‘ಈ ದೇಶದಲ್ಲಿ ಹಲವಾರು ಜನರ ಬಲಿದಾನ, ತ್ಯಾಗ ಹಾಗೂ ಅವರ ತನು, ಮನ, ಧನದ ಅರ್ಪಣೆಯಿಂದ ಬಂದಂತಹ ಸ್ವಾತಂತ್ರ್ಯ ನಮ್ಮದಾಗಿದೆ’ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಡಿ.ಕೆ ರಾಜರತ್ನ, ರೆಡ್ ಕ್ರಾಸ್ ಸಂಸ್ಥೆ ಸಂಚಾಲಕ ದತ್ತಾ ಸೋಮನಾಥ ರೆಡ್ಡಿ ಪಾಟೀಲ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಬನಶಂಕರಿ ಜನಪದ ಕಲಾ ತಂಡದವರು ಬೀದಿ ನಾಟಕ, ಜನಪದ ಗೀತೆಗಳು ಹಾಗೂ ನೃತ್ಯ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.