
ಅಫಜಲಪುರ: ‘ವಿವಿಧ ಬೇಡಿಕೆ ಈಡೇರಿಸುವಂತೆ ಮಾ.1 ರಂದು ಕೆಲಸ ಸ್ಥಗಿತಗೊಳಿಸಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುವ ಸರ್ಕಾರಿ ಪರವಾನಗಿ ಭೂಮಾಪಕರಿಂದ ಮುಷ್ಕರ ಆರಂಭಿಸಲಾಗುವುದು’ ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾಗಿ ಭೂಮಾಪಕರ ಸಂಘದ ತಾಲ್ಲೂಕು ಅಧ್ಯಕ್ಷ ಸಚಿನ್ ಗೌರ ತಿಳಿಸಿದರು.
ಈ ಕುರಿತು ಗುರುವಾರ ಕಚೇರಿಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿ, ‘ಈ ಹಿಂದೆ ಅನೇಕ ಬಾರಿ ನಮ್ಮ ಉದ್ಯೋಗ ಸಂಬಂಧಿತ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಇಲಾಖೆಗೆ ಹಾಗೂ ಸರ್ಕಾರಕ್ಕೆ ಲಿಖಿತವಾಗಿ ರಾಜ್ಯ ಸಂಘದಿಂದ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಹಾಗೂ ಇಲಾಖೆ ಈಡೇರಿಸುವುದಾಗಿ ಭರವಸೆ ನೀಡಿ ಕೈಬಿಟ್ಟುದೆ’ ಎಂದು ಆರೋಪಿಸಿದರು.
ಸಂಘದ ಉಪಾಧ್ಯಕ್ಷ ರಾಜು ಹಸರಗುಂಡಗಿ ಮಾತನಾಡಿ, ‘ನಮ್ಮ ಸೇವೆಯನ್ನು ಸಮಗ್ರವಾಗಿ ಪರಿಗಣಿಸಿ ಪರವಾನಗಿ ಭೂಮಾಪಕರನ್ನು ಖಾಯಂಗೊಳಿಸುವುದು, ಪ್ರತಿ ತಿಂಗಳು ನಿಗದಿತ ವೇತನ ವ್ಯವಸ್ಥೆ ಜಾರಿಗೆ ತರುವುದು, ಸೇವಾ ಭದ್ರತೆ ಒದಗಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ತತ್ವವನ್ನು ಅನುಷ್ಠಾನ ಸೇರಿದಂತೆ ಇನ್ನು ಹಲವು ಬೇಡಿಕೆ ಇಟ್ಟುಕೊಂಡು ಕೆಲಸ ಸ್ಥಗಿತಗೊಳಿಸಿ ಮಾ.1ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.
ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪರಿವೀಕ್ಷಕರಾದ ಸಿದ್ದಕ್ಕಿ ನಾಗೂರ್, ಅಖಿಲ ಕರ್ನಾಟಕ ಸರ್ಕಾರಿ ಪರವಾಗಿ ಭೂಮಾಪಕರ ಸಂಘದ ತಾಲ್ಲೂಕು ಪದಾಧಿಕಾರಿಗಳಾದ ಕಲ್ಲಯ್ಯ ಮಠ , ರಾಘವೇಂದ್ರ ರಾಠೋಡ, ಉಮೇಶ್ ಕಲಶೆಟ್ಟಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.