ಕಲಬುರಗಿ: ಇಲ್ಲಿನ ಹೀರಾಪುರ ಬಡಾವಣೆಯಲ್ಲಿ ಪತ್ನಿಯನ್ನು ಖಾರ ಕುಟ್ಟುವ ಹಾರಿಯಿಂದ ಹೊಡೆದು ಕೊಲೆ ಮಾಡಿದ ಪತಿಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಫಜಲಪುರ ತಾಲ್ಲೂಕಿನ ರೇವೂರ್ ಗ್ರಾಮದ ಸಂತೋಷ ಅಣ್ಣಾರಾಯ ಪಾಟೀಲ ಶಿಕ್ಷೆಗೆ ಒಳಗಾದವ. ಪತ್ನಿ ಸವಿತಾ ಕೊಲೆಯಾದವರು. ಹಲವು ವರ್ಷಗಳಿಂದ ಈ ದಂಪತಿ ಹೀರಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೌಟುಂಬಿಕ ಕಲಹದ ಕಾರಣ ಈ ಹಿಂದೆ ಸಂತೋಷ ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕಾಯಿತು. ತನ್ನನ್ನು ಜೈಲಿಗೆ ಕಳುಹಿಸಲು ಹೊಂಚು ಹಾಕಿದ್ದಾಳೆ ಎಂಬ ಕೋಪದಿಂದ ಸಂತೋಷನು ಖಾರ ಕುಟ್ಟುವ ಹಾರೆಯಿಂದ ಪತ್ನಿಯ ತಲೆ, ಕಿವಿಗೆ ಹೊಡೆದಿದ್ದ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಾಜೀದ್ ಪಟೇಲ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ವಿ.ಎನ್. ಜಗದೀಶ್ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಮೃತಳ ಮಕ್ಕಳಿಗೆ ಪರಿಹಾರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಕೂಡ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಪರವಾಗಿ 3ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.