ADVERTISEMENT

ಮಾನಶಿವಣಗಿ: ಪ್ರೇಮಿಗಳ ಆತ್ಮಹತ್ಯೆ

ಮದುವೆ ತಡ ಮಾಡಿದ್ದಕ್ಕೆ ಬೇಸರಗೊಂಡು ಮನೆ ಬಿಟ್ಟು ಹೋಗಿದ್ದ ಯುವ ಜೋಡಿ, ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:10 IST
Last Updated 16 ಫೆಬ್ರುವರಿ 2021, 3:10 IST

ಮಾನಶಿವಣಗಿ (ಯಡ್ರಾಮಿ): ಯಡ್ರಾಮಿ ತಾಲ್ಲೂಕಿನ ಅಖಂಡಹಳ್ಳಿ ಗ್ರಾಮದ ಹೊರವಲಯದ ಬೀಳು ಜಾಗದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೆ.11ರಂದು ಮನೆ ಬಿಟ್ಟು ಹೋಗಿದ್ದ ಪ್ರೇಮಿಗಳು ಸೋಮವಾರ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಾನಶಿವಣಗಿ ಗ್ರಾಮದ ಪರಶುರಾಮ ಪೂಜಾರಿ (23) ಹಾಗೂ ಭಾಗ್ಯಶ್ರೀ ಒಡೆಯರ್‌ (18) ಆತ್ಮಹತ್ಯೆ ಮಾಡಿಕೊಂಡವರು. ಇಬ್ಬರೂ ಸಂಬಂಧಿಕರೇ ಆಗಿದ್ದು, ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಪರಶುರಾಮ ಕೃಷಿ ಕೆಲಸ ಮಾಡಿಕೊಂಡಿದ್ದರೆ, ಭಾಗ್ಯಶ್ರೀ ಯಡ್ರಾಮಿ
ಯಲ್ಲಿ ಪಿಯುಸಿ ಓದುತ್ತಿದ್ದರು. ಕೆಲ ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು.

‘ಯಡ್ರಾಮಿಯಿಂದ 4 ಕಿ.ಮೀ. ದೂರದ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ವೇಲ್‌ನಿಂದ ಮರದ ಟೊಂಗೆಗೆ ಇಬ್ಬರೂ ನೇಣು ಹಾಕಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಗ್ರಾಮದ ಯುವಕನೊಬ್ಬ ಕಟ್ಟಿಗೆ ತರಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಎರಡೂ ದೇಹಗಳು ಕೊಳೆತು ನಾರುತ್ತಿದ್ದವು. ಮುಖಗಳನ್ನು ಹುಳುಗಳು ತಿಂದು ಗುರುತು ಸಿಗದಂತಾಗಿದ್ದವು’ ಎಂದು ಯಡ್ರಾಮಿ ಪಿಎಸ್‌ಐ ಗಜಾನಂದ ಬಿರಾದಾರ ಮಾಹಿತಿ ನೀಡಿದ್ದಾರೆ.

ADVERTISEMENT

‘ಸೋದರತ್ತೆಯ ಮಗನನ್ನೇ ಮದುವೆ ಆಗುವುದಾಗಿ ಪುತ್ರಿ ಭಾಗ್ಯಶ್ರೀ ಹೇಳಿದ್ದಳು. ಮನೆಯ ಹಿರಿಯರು ಸೇರಿ ಚರ್ಚಿಸಿ ಆದಷ್ಟು ಬೇಗ ನಿಶ್ಚಿತಾರ್ಥ ಪೂರ್ಣಗೊಳಿಸಿ, ಮದುವೆ ಸ್ವಲ್ಪ ಸಮಯ ಬಿಟ್ಟು ಮಾಡುವುದಾಗಿ ನಿರ್ಧರಿಸಿದ್ದೆವು. ಆದರೆ, ಮದುವೆ ಏಕೆ ತಡ ಮಾಡುತ್ತೀರಿ ಎಂದು ಬೇಸರಗೊಂಡು ಇಬ್ಬರೂ ಫೆ. 11ರಂದು ಮನೆ ಬಿಟ್ಟು ಹೋಗಿದ್ದರು. ಒಂದು ದಿನ ಸಂಬಂಧಿಕರ ಮನೆಯಲ್ಲಿ ಇದ್ದರು. ಆದರೆ, ಮಾರನೇ ದಿನದಿಂದ ಸಂಪರ್ಕಕ್ಕೆ ಸಿಗದಾದರು. ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತಳ ತಂದೆ ಮಲ್ಲಯ್ಯ ಒಡೆಯರ್‌ ದೂರಿನಲ್ಲಿ ತಿಳಿಸಿದ್ದಾರೆ.

ಆರು ಮಂದಿ ಬಂಧನ
ಕಲಬುರ್ಗಿ:
ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಜೂಜಾಟ ಆಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ₹ 46 ಸಾವಿರ ನಗದು, ಆರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಸಿಪಿ ಅಂಶುಕುಮಾರ್‌, ಪಿಎಸ್‌ಐ ವಾಹಿದ್‌ ಕೋತ್ವಾಲ್, ಸಿಬ್ಬಂದಿ ಈರಣ್ಣ, ಶಿವಾನಂದ, ಹುಸೇನ್‌ ಬಾಷಾ, ರಾಜು ಗಂಧೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.