ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಅದ್ದೂರಿ ರಥೋತ್ಸವ ಜರುಗಿತು.
ಜಾತ್ರೆ ನಿಮಿತ್ತ ಮಹಾಲಕ್ಷ್ಮಿ ಟ್ರಸ್ಟ್ ಕಮಿಟಿಯಿಂದ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ರಥೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಿತು.
ಬೆಳಿಗ್ಗೆ 10:30 ಗಂಟೆಗೆ ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್, ತಹಶೀಲ್ದಾರ್ ಮಲ್ಲಣ್ಣ ಯಲಗೋಡ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ದೇವಸ್ಥಾನದಿಂದ ಆರಂಭವಾದ ರಥೋತ್ಸವ ಬುಟ್ನಾಳ ರಸ್ತೆಯ ಸಜ್ಜನ ಕಲ್ಯಾಣ ಮಂಟಪದವರೆಗೆ ಸಾಗಿತು. ಈ ವೇಳೆಯಲ್ಲಿ ಭಕ್ತರು ‘ಮಹಾಲಕ್ಷ್ಮಿ ಮಾತಾ ಕೀ ಜೈ,ಕಲ್ಕತ್ತಾಯಿ ಮಾತಾ ಕೀ ಜೈ,ಮರಗಮ್ಮ ಮಾತಾ ಕೀ ಜೈ’ ಎಂದು ಜಯಘೋಷ ಹಾಕುತ್ತಾ ರಥದ ಮೇಲೆ ಬಾಳೆ ಹಣ್ಣು, ಉತ್ತತ್ತಿ, ಬದಾಮಿ ಎಸೆದು ಹರಕೆ ತೀರಿಸಿದರು.
ಮೆರವಣಿಗೆಯಲ್ಲಿ ಇನ್ನೂರಕ್ಕೂ ಹೆಚ್ಚು ಡೊಳ್ಳು, ಹಲಗೆ, ಕೋಲಾಟ, ಲೇಜಿಂ, ಡಿಜೆ ಸೌಂಡಿಗೆ ಯುವಕರು, ಯುವತಿಯರು ನೃತ್ಯ ಮಾಡಿ ಸಂಭ್ರಮಿಸಿದರು. ಬೆಳಿಗ್ಗೆ ಆರಂಭವಾದ ರಥೋತ್ಸವ ಅಖಂಡೇಶ್ವರ ರಾಜಬೀದಿ ಮೂಲಕ ಬುಟ್ನಾಳ ರಸ್ತೆಯ ಸಜ್ಜನ ಕಲ್ಯಾಣ ಮಂಟಪದ ವರೆಗೆ ಸಾಗಿತು. ನಂತರ ತಳವಾರ ಸಮುದಾಯದ ಭಕ್ತರು ದೇವಿಯ ಮೂರ್ತಿಯನ್ನು ರಥದ ಸಮೇತ ಹೆಗಲ ಮೇಲೆ ಹೊತ್ತುಕೊಂಡು ಸುಮಾರು ಮೂರು ಕಿ.ಮೀ. ಅಂತರದಲ್ಲಿರುವ ಏಳು ಊರಿನ ಸೀಮೆಯ ಮಧ್ಯದಲ್ಲಿ ಬರುವ ಆಯಿ ತಳದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಕಲಬುರಗಿ ಜಿಲ್ಲೆಯ ಜೇವರ್ಗಿನಲ್ಲಿ ಶನಿವಾರ ನಡೆದ ಕಲ್ಕತ್ತದೇವಿ(ಮಹಾಲಕ್ಷ್ಮೀ) ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ
ರಥೋತ್ಸವಕ್ಕೂ ಮುನ್ನ ನಸುಕಿನ ಜಾವದಿಂದ ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. ಮುತೈದೆಯರು ದೇವಿಗೆ ಉಡಿ ತುಂಬಿದರು. ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜಾತ್ರೆಯಲ್ಲಿ ಭಂಡಾರ ಸಿಡಿಸಿ ಭಕ್ತರು ಪಾವನಗೊಂಡರು. ಜಾತ್ರಾ ಕಮಿಟಿ ವತಿಯಿಂದ ಬಂದ ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೇ ರಥೋತ್ಸವ ಸಾಗುವ ದಾರಿಯುದ್ದಕ್ಕೂ ಕಿರಾಣಾ, ಆಗ್ರೋ, ಕಾರ್ಪೇಂಟರ್ ವರ್ತಕರ ಸಂಘ, ಹಲವು ಸಂಘಸಂಸ್ಥೆಗಳ ವತಿಯಿಂದ ಅನ್ನಸಂತರ್ಪಣೆ ಜರುಗಿತು. ಸಂಜೆ ಕುಸ್ತಿ, ಗೀಗೀ ಪದಗಳು, ಲಾವಣಿ ಪದ, ಬಯಲಾಟ ಕಾರ್ಯಕ್ರಮ ಜರುಗಿದವವು.
ಸೊನ್ನದ ಶಿವಾನಂದ ಸ್ವಾಮೀಜಿ, ಶಖಾಪೂರದ ಸಿದ್ದರಾಮ ಶಿವಾಚಾರ್ಯರು, ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಕೆಆರ್ಟಿಸಿ ಅಧ್ಯಕ್ಷ ಅರುಣ್ ಕುಮಾರ ಎಂ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಕುಮಾರ ಪಾಟೀಲ ಹರವಾಳ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಕಾರ್ಯದರ್ಶಿ ರಮೇಶಬಾಬು ವಕೀಲ್, ಸೋಮಣ್ಣ ಕಲ್ಲಾ, ಷಣ್ಮುಖಪ್ಪ ಹಿರೇಗೌಡ, ರಾಜಶೇಖರ ಸೀರಿ, ದಂಡಪ್ಪಗೌಡ ಪೊಲೀಸ್ ಪಾಟೀಲ, ಗುರುಗೌಡ ಮಾಲಿಪಾಟೀಲ, ಜಗದೀಶ್ ವಿಶ್ವಕರ್ಮ, ಗುಂಡು ಬಡಿಗೇರ, ಗಣೇಶ ಮಹೇಂದ್ರಕರ್, ಈರಯ್ಯಸ್ವಾಮಿ ಘಂಟಿಮಠ, ರವಿ ಕೋಳಕೂರ, ಶರಣಗೌಡ ಸರಡಗಿ, ರಾಮಣ್ಣ ಪೂಜಾರಿ, ರಾಜು ತಳವಾರ, ಭೀಮು ತಳವಾರ, ಹರಿಶ್ಚಂದ್ರ ಕೊಡಚಿ, ದೇವಾನಂದ ಡೂಗನಕರ್, ಮರೆಪ್ಪ ಕೋಬಾಳಕರ್, ಭೀಮರಾಯ ಹಳ್ಳಿ, ಶರಣು ಗುತ್ತೇದಾರ, ತುಳಜಾರಾಮ ರಾಠೋಡ, ಪ್ರಭು ಜಾಧವ, ಶಿವಪ್ಪ ಮಡಿವಾಳಕರ್, ಭೀಮು ಮಡಿವಾಳಕರ್ ಸೇರಿದಂತೆ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ರಥೋತ್ಸವದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿವೈಎಸ್ಪಿ ಲೋಕೇಶಪ್ಪ, ಸಿಪಿಐ ರಾಜೆಸಾಬ ನದಾಫ್, ಪಿಎಸ್ಐ ಗಜಾನಂದ ಬಿರಾದಾರ, ನೆಲೋಗಿ ಪಿಎಸ್ಐ ಚಿದಾನಂದ ಸವದಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಲಬುರಗಿ ಜಿಲ್ಲೆಯ ಜೇವರ್ಗಿನಲ್ಲಿ ಶನಿವಾರ ನಡೆದ ಕಲ್ಕತ್ತದೇವಿ (ಮಹಾಲಕ್ಷ್ಮೀ) ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಹಲಗೆ ವಾದನ ತಂಡ
ಕಲಬುರಗಿ ಜಿಲ್ಲೆಯ ಜೇವರ್ಗಿನಲ್ಲಿ ಶನಿವಾರ ನಡೆದ ಕಲ್ಕತ್ತದೇವಿ (ಮಹಾಲಕ್ಷ್ಮೀ) ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಯುವಕರ ಕೋಲಾಟದ ತಂಡ
ಕಲಬುರಗಿ ಜಿಲ್ಲೆಯ ಜೇವರ್ಗಿನಲ್ಲಿ ಶನಿವಾರ ನಡೆದ ಕಲ್ಕತ್ತದೇವಿ(ಮಹಾಲಕ್ಷ್ಮೀ) ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಲಗೆ ವಾದನ ತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.