ಸೇಡಂ: ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರೆದಿರುವುದರಿಂದ ಜನ ತತ್ತರಿಸಿದ್ದಾರೆ.
ಹೆಚ್ಚುತ್ತಿರುವ ಮಳೆಯ ಆರ್ಭಟದ ಜೊತೆಗೆ ಉಕ್ಕಿ ಹರಿಯುತ್ತಿರುವ ಹಳ್ಳ, ಕೊಳ್ಳಗಳು, ನದಿಗಳಿಂದ ಜನರು ಕಂಗಾಲಾಗಿದ್ದಾರೆ. ಮಳಖೇಡ ಸೇತುವೆ ಮೇಲೆ ನೀರು ಬಂದಿರುವುದರಿಂದ ರಾಜ್ಯಹೆದ್ದಾರಿ–10 ಕಲಬುರ್ಗಿ–ಸೇಡಂ ಸಂಪರ್ಕ ಕಲ್ಪಿಸುವ ಸೇತುವೆ ಮೇಲಿನ ಸಂಚಾರ ಬುಧವಾರ ಸ್ಥಗಿತಗೊಂಡಿದೆ.
ಅಲ್ಲದೇ ಮಳಖೇಡದ ಉತ್ತರಾದಿಮಠ, ಮೊರಾರ್ಜಿ ದೇಸಾಯಿ ಶಾಲೆಯ ಒಳಗಡೆ ನೀರು ನುಗ್ಗಿದೆ. ಮಳಖೇಡನ ಕೋಲಿವಾಡದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಾಮಗ್ರಿ, ಸೇರಿದಂತೆ ದವಸ ಧಾನ್ಯಗಳ ಸುರಕ್ಷತೆಗೆ ಹರಸಾಹಸ ಪಡುವಂತಾಯಿತು.
ಮಳಖೇಡನಿಂದ ಸಂಗಾವಿ (ಎಂ) ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ, ತಾಲ್ಲೂಕಿನ ಸಟಪಟನಹಳ್ಳಿ ಸೇತುವೆ ಮುಳುಗಡೆಯಾಗಿದೆ. ಜೊತೆಗೆ ಬಿಬ್ಬಳ್ಳಿ ಸೇತುವೆ, ಹೆಡ್ಡಳ್ಳಿ ಸೇರಿದಂತೆ ಕಾಗಿಣಾ ನದಿ ಮೇಲಿರುವ ಸೇತುವೆಗಳು ಬಹುತೇಕ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಅತಿವೃಷ್ಟಿಯಿಂದಾಗಿ ಜನ ಜೀವನ ಹಾಗೂ ರೈತರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸುರಕ್ಷತೆಯತ್ತ ತೆರಳುತ್ತಿದ್ದಾರೆ. ಭೀಕರ ಮಳೆಯಿಂದಾಗಿ ತಾಲ್ಲೂಕಿನಲ್ಲಿರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಗ್ರಾಮಗಳ ಮನೆಗಳಿಗೆ ನೀರು ನುಗ್ಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.