ADVERTISEMENT

ಸೋಲು ಮರೆತು ಪಕ್ಷ ಕಟ್ಟೋಣ: ಖರ್ಗೆ

ಅಫಜಲಪುರದಲ್ಲಿ ಕಾಂಗ್ರೆಸ್‌ ಕೃತಜ್ಞತಾ ಸಭೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 15:54 IST
Last Updated 25 ಜೂನ್ 2019, 15:54 IST
ಅಫಜಲಪುರದಲ್ಲಿ ಮಂಗಳವಾರ ಅಭಿನಂದನಾ ಸಭೆಯಲ್ಲಿ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಶಾಸಕ ಎಂ.ವೈ.ಪಾಟೀಲ ಮತ್ತಿತರರು ಇದ್ದರು
ಅಫಜಲಪುರದಲ್ಲಿ ಮಂಗಳವಾರ ಅಭಿನಂದನಾ ಸಭೆಯಲ್ಲಿ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಶಾಸಕ ಎಂ.ವೈ.ಪಾಟೀಲ ಮತ್ತಿತರರು ಇದ್ದರು   

ಅಫಜಲಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಲೋಕಸಭಾ ಚುನಾವಣೆಯಲ್ಲಿ ಸೋಲಾಗಿದೆ. ಇನ್ನು ಮುಂದೇನು ಮಾಡಬೇಕು ಎಂಬುವುದರ ಕುರಿತು ವಿಚಾರ ಮಾಡೋಣ. ಆಗಿದ್ದನ್ನು ಮರೆತು ತಳಮಟ್ಟದಿಂದ ಪಕ್ಷವನ್ನು ಸಂಘಟಿಸಲು ಎಲ್ಲ ಹಂತದ ನಾಯಕರು, ಕಾರ್ಯಕರ್ತರು ಶ್ರಮಿಸಬೇಕು’ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಇಲ್ಲಿ ಹೇಳಿದರು.

ಕಾಂಗ್ರೆಸ್‌ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಏಪರ್ಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಮನೆ-ಮನೆಗೆ ಹೋಗಿ ಭಾವನಾತ್ಮಕವಾಗಿ ಮತದಾರರ ಮನಸ್ಸನ್ನು ಬೇರೆ ಕಡೆ ಸೆಳೆದಿದ್ದಾರೆ. ನಾವೇನು ಧರ್ಮ ವಿರೋಧಿಗಳಾ? ದೇಶದ ರಕ್ಷಣೆಯಲ್ಲಿ ಎಲ್ಲ ಧರ್ಮದ ಸೈನಿಕರು ಇದ್ದಾರೆ’ ಎಂದರು.

‘ನನ್ನ ಅಧಿಕಾರವಧಿಯಲ್ಲಿ ಜಿಲ್ಲೆಗೆ ಮತ್ತು ಅಫಜಲಪುರ ತಾಲ್ಲೂಕಿಗೆ ಅನೇಕ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. 371 (ಜೆ) ವಿಧಿ ಜಾರಿಗೆ ತಂದಿದ್ದು ನನಗಾಗಿ ಅಲ್ಲ, ಎಲ್ಲ ವರ್ಗದ ಜನರು ಅದರ ಉಪಯೋಗವನ್ನು ಪಡೆಯುತ್ತಿದ್ದಾರೆ. ಆದರೆ ನಾನು ಮಾಡಿರುವ ಕೆಲಸಗಳನ್ನು ನೀವು ಯಾರು ನೋಡಲಿಲ್ಲ, ತತ್ವ ಸಿದ್ಧಾತಗಳನ್ನು ಗಮನಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಪ್ರಧಾನಿ ಮೋದಿಯವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ಮುಂದಿನ ಬಾರಿ ನೀವು ಲೋಕಸಭೆಗೆ ಬರುವುದಿಲ್ಲ ಎಂದು ಹೇಳಿದ್ದರು. ಅಂದಿನಿಂದಲೇ ಅವರು ನನ್ನ ಸೋಲಿಗೆ ಸಂಚು ರೂಪಿಸಿದ್ದಾರೆ. ಆದ್ದರಿಂದಲೇ ಚುನಾವಣೆಯಲ್ಲಿ ಜಾಗರೂಕತೆಯಿಂದ ಕೆಲಸ ಮಾಡಿ ಎಂದು ನಾನು ಹೇಳಿದ್ದೆ. ನನ್ನ ಚುನಾವಣೆಯಲ್ಲಿ ಸಾಕಷ್ಟು ಶ್ರಮಪಟ್ಟು ಕೆಲಸ ಮಾಡಿದ ಕಾರ್ಯಕರ್ತರಿಗೆ ಮತದಾನ ಮಾಡಿದ ಮತದಾರರಿಗೆ ಕೃತಜ್ಞತೆಗಳು’ ಎಂದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣ ಕಮಕನೂರ, ಮುಖಂಡರಾದ ಮಾರುತಿರಾವ ಮಾಲೆ, ಜಗನ್ನಾಥ ಗೋಧಿ, ಬಸವರಾಜ ಭೀಮಳ್ಳಿ, ಭಾಗಣ್ಣಗೌಡ ಸಂಕನೂರ, ಹಾಸಿಂಪಿರ ವಾಲಿಕಾರ, ಮಕಬೂಲ ಪಟೇಲ್, ರಾಜೇಂದ್ರ ಪಾಟೀಲ್ ರೇವೂರ, ಜಿ.ಪಂ ಸದಸ್ಯ ಅರುಣಕುಮಾರ ಪಾಟೀಲ, ಪ್ರಕಾಶ ಜಮಾದಾರ, ಸಿದ್ದು ಶಿರಸಗಿ,ಮತೀನ್ ಪಟೇಲ್, ಮಹಾಂತೇಶ ಪಾಟೀಲ್, ತುಕಾರಾಮಗೌಡ ಪಾಟೀಲ್, ಪಪ್ಪು ಪಟೇಲ್, ಸಿದ್ದಾರ್ಥ ಬಸರಿಗಿಡದ, ಶರಣು ಕುಂಬಾರ, ಭೀಮಾಶಂಕರ ಹೊನ್ನಕೇರಿ, ಶಿವಾನಂದ ಗಾಡಿಸಾಹುಕಾರ, ಹಣಮಂತರಾಯ ದೊಡಮನಿ, ನಾಗೇಶ ಕೊಳ್ಳಿ, ದಯಾನಂದ ದೊಡಮನಿ, ಮಲ್ಲಿಕಾರ್ಜುನ ಗೌರ, ಮಹಾನಿಂಗ ಅಂಗಡಿ, ರಮೇಶ ಪೂಜಾರಿ ಇದ್ದರು.

ಮರೆಯಲಾಗದ ಸೋಲು...
ಅಫಜಲಪುರ: ಶಾಸಕ ಎಂ.ವೈ.ಪಾಟೀಲರು ಮಾತನಾಡಿ ‘ಅಭಿವೃದ್ಧಿಪರ ವ್ಯಕ್ತಿಗೆ ಜನ ಮತ ನೀಡಿಲ್ಲ. ನನ್ನನ್ನು ರಾಜಕೀಯವಾಗಿ ಮೇಲೆತ್ತಿದ ಖರ್ಗೆ ಸೋತಿದ್ದಾರೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಮಾತು ನನ್ನ ಮನಸ್ಸಿನಲ್ಲಿ ಬಂದು ಹೋಗುತ್ತಿದೆ. ಖರ್ಗೆ ಅವರ ಸೋಲನ್ನು ಮರೆತು ಬಿಡಿ ಎಂದು ಮುಖಂಡರು ಹೇಳುತ್ತಾರೆ, ಆದರೆ ನನಗೆ ಮರೆಯಲು ಆಗುವುದಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಖರ್ಗೆ ಅವರು ‘ನನ್ನ ಸೋಲಿನಿಂದ ನಿವೇಕೆ ರಾಜೀನಾಮೆ ನೀಡುತ್ತೀರಿ, ನಿಮ್ಮ ಮನಸ್ಸಿನಲ್ಲಿನ ಯೋಚನೆಯನ್ನು ತೆಗೆದು ಹಾಕಿ ಎಲ್ಲರೂ ಸೇರಿ ಪಕ್ಷ ಕಟ್ಟೋಣ’ ಎಂದು ಎಂ.ವೈ.ಪಾಟೀಲರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.