ADVERTISEMENT

ಎತ್ತು ಕದ್ದ ಆರೋಪ: ಮರಕ್ಕೆ ಕಟ್ಟಿ ಥಳಿತ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 20:15 IST
Last Updated 18 ಜುಲೈ 2023, 20:15 IST
ಕಲಬುರಗಿಯ ಜಂಬಗಾ(ಬಿ) ಗ್ರಾಮದಲ್ಲಿ ಥಳಿತಕ್ಕೆ ಒಳಗಾದ ಎತ್ತು ಕದ್ದ ಆರೋಪಿ ಮಂಜುನಾಥ
ಕಲಬುರಗಿಯ ಜಂಬಗಾ(ಬಿ) ಗ್ರಾಮದಲ್ಲಿ ಥಳಿತಕ್ಕೆ ಒಳಗಾದ ಎತ್ತು ಕದ್ದ ಆರೋಪಿ ಮಂಜುನಾಥ   

ಕಲಬುರಗಿ: ತಾಲ್ಲೂಕಿನ ಜಂಬಗಾ (ಬಿ) ಗ್ರಾಮದಲ್ಲಿ ಎತ್ತು ಕದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಮಂಗಳವಾರ ಹಿಡಿದು ಮರಕ್ಕೆ ಕಟ್ಟಿ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಂಬಗಾ (ಬಿ) ನಿವಾಸಿ ಮಂಜುನಾಥ ಎಂಬಾತನನ್ನು ಸಬ್‌ಅರ್ಬನ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದೇ ಗ್ರಾಮದ ಮಲ್ಲಣ್ಣ ದೇಗಾಂವ ಅವರು ತಮ್ಮ ಎರಡು ಎತ್ತುಗಳನ್ನು ಜಮೀನಿನಲ್ಲಿ ಕಟ್ಟಿದ್ದರು. ಮಂಜುನಾಥ ಸೋಮವಾರ ರಾತ್ರಿ ಒಂದು ಎತ್ತು ಕದ್ದು, ನೆರೆಯ ಅವರಾದ ಗ್ರಾಮಕ್ಕೆ ತೆರಳಿ ಮಾರಲು ಯತ್ನಿಸಿದ್ದ. ಎತ್ತಿನ ಪೂರ್ವಾಪರ ವಿಚಾರಿಸಿದಾಗ ಕದ್ದು ತಂದಿದ್ದು ಎಂದು ಗೊತ್ತಾಯಿತು. ತಕ್ಷಣವೇ ಜಂಬಗಾ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ADVERTISEMENT

ಅವರಾದ ಗ್ರಾಮದಿಂದ ಮಂಜುನಾಥನ್ನು ಹಿಡಿದು ತಂದು ಜಂಬಗಾ ಗ್ರಾಮದ ಬೇವಿನ ಮರಕ್ಕೆ ಕಟ್ಟಲಾಯಿತು. ಕೆಲ ಸಮಯದ ನಂತರ ಸಬ್‌ಅರ್ಬನ್‌ ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಲಾಯಿತು ಎಂದರು.

‘ಆರೋಪಿ ಮದ್ಯದ ನಶೆಯಲ್ಲಿ ಮಾಲೀಕರ ಎತ್ತು ಕದ್ದು, ಮಾರಲು ಯತ್ನಿಸುತ್ತಿದ್ದ. ಗ್ರಾಮಸ್ಥರ ನೆರವಿನಿಂದ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ ನಶೆಯಲ್ಲಿ ಆಗಾಗ ಗ್ರಾಮಸ್ಥರಿಗೂ ತೊಂದರೆ ನೀಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.