ADVERTISEMENT

ಕೊಡಲಿಯಿಂದ ಕೊಚ್ಚಿ ವ್ಯಕ್ತಿ ಕೊಲೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 2:32 IST
Last Updated 12 ಏಪ್ರಿಲ್ 2022, 2:32 IST

ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕರಜಗಿ ಸಮೀಪದ ಅಶೋಕ ನಗರದ ಜಮೀನಿನಲ್ಲಿ ಮಲಗಿದ್ದ ಬಸವರಾಜ ಕಾಲೇಸಾಬ್ ಕಲ್ಲಹಿಪ್ಪರಗಿ (40) ಎಂಬುವವರನ್ನು ಭಾನುವಾರ ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಇವರ ಜತೆಗೆ ಇದ್ದ ಗಂಗಾಧರ ಸಿದ್ಧಲಿಂಗ ಸೊನ್ನ ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯ ಹತ್ತಿರದಲ್ಲಿ ಇರುವ ಜಮೀನಿನಲ್ಲಿ ಬಸವರಾಜ ಮತ್ತು ಗಂಗಾಧರ ಮಲಗಿದ್ದರು. ರಾತ್ರಿ ವೇಳೆ ಅಪರಿಚಿತರು ದಾಳಿ ಮಾಡಿಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗಂಗಾಧರ ಅವರಿಗೆ ಮೂಗು, ಕಣ್ಣಿಗೆ ಗಂಭೀರ ಗಾಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬೆಳಿಗ್ಗೆ ಜಮೀನುಗಳಿಗೆ ತೆರಳಿದ್ದ ಗ್ರಾಮಸ್ಥರು ಈ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಗಮನಿಸಿದ್ದರು. ಗ್ರಾಮಕ್ಕೆ ಓಡಿ ಬಂದು ಕೊಲೆಯಾದ ವಿಷಯ ತಿಳಿಸಿದರು. ವಾಪಸ್ ಬರುವ ವೇಳೆಗೆ ತೀವ್ರವಾಗಿ ಗಾಯಗೊಂಡಿದ್ದ ಗಂಗಾಧರ ಎದ್ದು ಕುಳಿತಿದ್ದರು. ಬಳಿಕ ಅವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಿದ್ದಾರೆ.

ಕೊಲೆಗೆ ಕಾರಣ ತಿಳಿದುಬಂದಿಲ್ಲ. ಹತ್ಯೆಯ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯನಡೆದಿದೆ. ಮೃತರ ಸಹೋದರ ಚಿದಾನಂದ ಕಲ್ಲಹಿಪ್ಪರಗಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ ಎಂದು ಅಫಜಲಪುರ ಸಿಪಿಐ ಜಗದೇವಪ್ಪ ಪಾಳಾ ತಿಳಿಸಿದರು.

ಸ್ಥಳಕ್ಕೆ ಎಸ್ಪಿ ಇಶಾ ಪಂತ್, ಅಳಂದ ಡಿವೈಎಸ್ಪಿ ರವೀಂದ್ರ ಶಿರೂರ, ಪಿಎಸ್ಐ ವಿಶ್ವನಾಥ ಮುದರಡ್ಡಿ, ಬೆರಳಚ್ಚು ತಜ್ಞರು, ಶ್ವಾನದಳದ ತಂಡದವರು ಭೇಟಿ ನೀಡಿ ಪರಿಶೀಲಿಸಿದರು.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.