ಕಲಬುರ್ಗಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಎಲ್ಲ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿವಿಧ ಔಷಧಗಳನ್ನು ಮಂಗಳವಾರ ಜಿಮ್ಸ್ನಲ್ಲಿ ವಿತರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ಜಿಮ್ಸ್ ಆಸ್ಪತ್ರೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ ಔಷಧಿ ವಿತರಿಸಿದರು. ಆಯುರ್ವೇದ ಪದ್ಧತಿಯ ಷಂಶಮನಿ ವಟಿ, ಹೋಮಿಯೋಪಥಿಕ್ನ ಅರ್ಸೆನಿಕ್ ಅಲ್ಬಂ–30 ಹಾಗೂ ಯುನಾನಿಯ ಆರ್ಕ್ ಎ ಅಜೀಬ್ ಔಷಧಿಗಳನ್ನು ಅವರು ನೀಡಿ, ಅವುಗಳನ್ನು ತೆಗೆದುಕೊಳ್ಳುವ ವಿಧಾನವನ್ನೂ ತಿಳಿಸಿದರು.
‘ಕೊರೊನಾ ವೈರಸ್ ತಡೆಗಟ್ಟಲು ಯಾವುದೇ ಔಷಧಿ ಮತ್ತು ಚುಚ್ಚುಮದ್ದು ಇನ್ನೂ ಇಲ್ಲ. ಆಯುಷ್ ಇಲಾಖೆಯಿಂದ ನೀಡಲಾಗುವ ಆಯುರ್ವೇದ, ಹೋಮಿಯೋಪತಿ, ಯುನಾನಿ ಔಷಧಿಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಉಪಯುಕ್ತವಾಗಿದೆ. ವೈರಾಣು ತಗುಲಿದರೂ ಇವು ತಡೆದುಕೊಳ್ಳುವ ಶಕ್ತಿ ನೀಡುತ್ತವೆ. ಔಷಧಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಆಡಳಿತ ವೈದ್ಯಾಧಿಕಾರಿ (ಪಂಚಕರ್ಮ) ಡಾ.ಚಿದಾನಂದ ಮೂರ್ತಿ ಅವರು, ಜೀವನ ಶೈಲಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುರಿತು ಮಾಹಿತಿ ನೀಡಿದರು. ಡಾ.ಪ್ರಿಯಾಂಕ, ಆಯುರ್ವೇದ ಷಂಶಮನಿ ಮಾತ್ರೆ ಸೇವಿಸುವ ವಿಧಾನ, ಸಮಯ ಹಾಗೂ ಅಡ್ಡಪರಿಣಾಮ ಕುರಿತು ಹಾಗೂ ಹೋಮಿಯೋಪತಿ ತಜ್ಞ ವೈದ್ಯ ಡಾ.ರಿಯಾಜ್ ಸುಳ್ಳದ ಅವರು ಹೋಮಿಯೋಪತಿ ಔಷಧಿ ಹಾಗೂ ಸೇವಿಸುವ ವಿಧಾನದ ಕುರಿತು ಮಾಹಿತಿ ನೀಡಿದರು.
ಸರ್ಕಾರಿ ಯೂನಾನಿ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿಗಳಾದ ಡಾ.ಖುತೇಜಾ ಸುಲ್ತಾನಾ, ಆರ್ಎಂಒ ರಘುನಾಥ ಕುಲಕರ್ಣಿ, ಡಾ.ಶ್ರೀನಾಥ ರಾಠೋಡ ಹಾಗೂ ದಂತ ವೈದ್ಯ ಡಾ.ಸಂಗಮ್ಮ ಸೇರಿದಂತೆ ಪಂಚಕರ್ಮ ಸಿಬ್ಬಂದಿ ವರ್ಗದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.