ಕಲಬುರಗಿ: ರಾಷ್ಟ್ರೀಯ ಶಿಕ್ಷಣ ನೀತಿಯ ವಾಣಿಜ್ಯಶಾಸ್ತ್ರದ ಪಠ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಅರ್ಥಶಾಸ್ತ್ರ ಸಂಘದ ಪದಾಧಿಕಾರಿಗಳು ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅವರಿಗೆ ಮನವಿಪತ್ರ ಸಲ್ಲಿಸಿದರು.
‘ಜಾಗತಿಕ ಮಹತ್ವ ಪಡೆದಿರುವ ಮತ್ತು ಭಾರತೀಯ ಅರ್ಥವ್ಯವಸ್ಥೆಯ ಹೊಸ ದಿಕ್ಕು-ದೆಸೆ ನಿರ್ಧರಿಸುವಂತಹ ಅರ್ಥಶಾಸ್ತ್ರ ವಿಷಯವನ್ನು ವಾಣಿಜ್ಯಶಾಸ್ತ್ರದ ಹೊಸ ಪಠ್ಯಕ್ರಮದಲ್ಲಿ ಕೈಬಿಟ್ಟಿರುವುದು ಸರಿಯಲ್ಲ. ಅರ್ಥಶಾಸ್ತ್ರವು ವಾಣಿಜ್ಯಶಾಸ್ತ್ರದ ಮೂಲಬೇರು ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು’ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
‘ಅರ್ಥಶಾಸ್ತ್ರ ವಿಷಯವನ್ನು ಕೈಬಿಡುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪದವಿ ಕೋರ್ಸಗಳಲ್ಲಿ ಕಾರ್ಯಭಾರ ಕಡಿಮೆಯಾಗಿ, ಅರ್ಥಶಾಸ್ತ್ರದ ಅಧ್ಯಾಪಕರು ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದು ಉದ್ಯೋಗದ ಪ್ರಶ್ನೆ ಅಷ್ಟೇ ಅಲ್ಲ, ಅರ್ಥಶಾಸ್ತ್ರದ ಅಸ್ತಿತ್ವದ ಪ್ರಶ್ನೆ ಹುಟ್ಟು ಹಾಕುತ್ತದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಅವರು ಹೇಳಿದರು.
‘ವಾಣಿಜ್ಯಶಾಸ್ತ್ರದ ಹೊಸ ಪಠ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಮರು ಸೇರ್ಪಡೆಗೊಳಿಸಬೇಕು. ವಾಣಿಜ್ಯಶಾಸ್ತ್ರದ ಬಹುತೇಕ ವಸ್ತು-ವಿಷಯಗಳು ಮತ್ತು ತತ್ವ-ಸಿದ್ಧಾಂತಗಳು ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳಾಗಿವೆ. ಯಾವುದೇ ಕಾರಣಕ್ಕೂ ಅರ್ಥಶಾಸ್ತ್ರ ವಿಷಯಕ್ಕೆ ಅನ್ಯಾಯ ಮಾಡಬಾರದು’ ಎಂದು ಅವರು ಮನವಿ ಮಾಡಿದರು.
ಸಂಘದ ಅಧ್ಯಕ್ಷ ಡಾ. ದಶರಥ ಮೇತ್ರೆ, ಪ್ರಧಾನ ಕಾರ್ಯದರ್ಶಿ ಡಾ. ಶರಣಪ್ಪ ಸೈದಾಪುರ, ಪ್ರೊ.ಕನಕಪ್ಪ ಬಿಲ್ಲವ, ಪ್ರೊ.ನಿರ್ಮಲಾ ಸಿರಗಾಪೂರ, ಪ್ರೊ.ಮಲ್ಲಣ್ಣ ಎನ್.ಬಿ., ತ್ರಿವೇಣಿ, ಡಾ. ಶ್ರೀದೇವಿ, ಸುನೀತಾ, ಅರುಣಾ ತಂಬಾಕೆ, ಪ್ರೊ.ನೀಲಮ್ಮ ಪಾಟೀಲ, ಪ್ರೊ.ಹನುಮಂತ, ಪ್ರೊ.ಜ್ಯೋತಿ, ದೀಪಾ, ಶಿವಾನಂದ, ಆಷಿಯಾ ಬೇಗಂ, ಪ್ರೊ.ರಾಜಕುಮಾರ, ರಾಜೇಂದ್ರ ಕಪ್ಟೆ, ಡಾ.ಕೃಷ್ಣಮೂರ್ತಿ ಕುಲಕರ್ಣಿ, ಕಾರ್ತಿಕ, ಅಂಬಿಕಾ, ಅರ್ಚನಾ, ಕೃತಿಕಾ, ಜಯಶ್ರೀ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.