ಕಲಬುರಗಿ: ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿದ್ದ ಕಾರು ಎದುರಿನ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಚಿವರೊಂದಿಗೆ ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂಸದ ಡಾ. ಉಮೇಶ ಜಾಧವ ಅವರು ಆಯತಪ್ಪಿ ಮಧ್ಯದ ಸೀಟಿನಿಂದ ಮುಂದಿನ ಸೀಟಿಗೆ ಸರಿದಿದ್ದರಿಂದ ಅವರ ಕೈ ಹಾಗೂ ಕಾಲಿಗೆ ಗಾಯವಾಗಿದೆ.
ತಕ್ಷಣ ಆಸ್ಪತ್ರೆಗೆ ತೆರಳಿದ ಸಂಸದರಿಗೆ ವೈದ್ಯರು ಚಿಕಿತ್ಸೆ ನೀಡಿದರು. ಸ್ಕ್ಯಾನಿಂಗ್ ಮಾಡಿಸಿದಾಗ ಕೈಗೆ ಫ್ರ್ಯಾಕ್ಚರ್ ಆಗಿರುವುದು ಕಂಡು ಬಂದಿದೆ ಎಂದು ಸಂಸದ ಡಾ. ಜಾಧವ ‘ಪ್ರಜಾವಾಣಿ’ಗೆ ತಿಳಿಸಿದರು.
ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ವಿಸ್ತರಣಾ ಘಟಕದ ಕಟ್ಟಡದ ಶಂಕು ಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿ ಅವರೊಂದಿಗೇ ಕಾರಿನಲ್ಲಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಸಚಿವರು ತಂದಿದ್ದ ಹೆಲಿಕಾಪ್ಟರ್ ಆದಷ್ಟು ಬೇಗ ಟೇಕಾಫ್ ಆಗಬೇಕಿದ್ದುದರಿಂದ ಕಾರು ವೇಗವಾಗಿ ಹೊರಟಿತ್ತು. ರೋಡ್ ಬ್ರೇಕ್ ಬಂದಿದ್ದರಿಂದ ಬೆಂಗಾವಲು ಪಡೆಯ ವಾಹನ ನಿಧಾನಗೊಂಡಿತು. ಸಚಿವರಿದ್ದ ಕಾರು ನಿಯಂತ್ರಣ ತಪ್ಪಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆಯಿತು. ಮಧ್ಯದ ಸೀಟಿನಲ್ಲಿ ಕುಳಿತಿದ್ದ ಸಂಸದರು ಚಾಲಕನ ಬಳಿ ಚಲಿಸಿದರು. ಹೀಗಾಗಿ ಕೈಗೆ ಗಾಯವಾಯಿತು.
2018ರಲ್ಲಿ ಚಿಂಚೋಳಿಯಲ್ಲಿ ಕಾರ ಹುಣ್ಣಿಮೆಯಲ್ಲಿ ಭಾಗವಹಿಸಿದಾಗಲೂ ಡಾ. ಜಾಧವ ಅವರ ಕೈ ಹಾಗೂ ಕಾಲಿಗೆ ಗಾಯಗೊಂಡಿತ್ತು. ಅದೇ ಸ್ಥಳದಲ್ಲಿ ಮತ್ತೆ ಪೆಟ್ಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.