ಕಲಬುರಗಿ: ‘ಚಿತ್ತಾಪುರ ತಾಲ್ಲೂಕಿನ ಸನ್ನತಿ ಮತ್ತು ಕನಗನಹಳ್ಳಿಯಲ್ಲಿ ಬೌದ್ಧ ಸ್ತೂಪ ಪತ್ತೆಯಾಗಿರುವುದು ಮತ್ತು ದೇಶ–ವಿದೇಶದಿಂದ ಇತಿಹಾಸ ತಜ್ಞರು ಇಲ್ಲಿಗೆ ಭೇಟಿ ನೀಡುತ್ತಿರುವ ಕಾರಣ ಈ ಪ್ರಾಗೈತಿಹಾಸಿಕ ಮಹತ್ವದ ತಾಣವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು’ ಎಂದು ಸಂಸದ ಡಾ. ಉಮೇಶ ಜಾಧವ ಒತ್ತಾಯಿಸಿದ್ದಾರೆ.
ಸಂಸತ್ ಅಧಿವೇಶನದಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿದ ಅವರು, ‘ಭೀಮಾ ತೀರದಲ್ಲಿರುವ ಸನ್ನತಿ ಪರಿಸರದಲ್ಲಿ ಅಧೋಲೋಕ ಮಹಾಚೈತ್ಯವನ್ನು (ಬೌದ್ಧ ಸ್ತೂಪ) ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಪತ್ತೆ ಮಾಡಲಾಗಿದೆ. ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಲಿಪಿಯಲ್ಲಿ ಇಲ್ಲಿ ಶಾಸನಗಳನ್ನು ಕೆತ್ತಲಾಗಿದೆ’ ಎಂದು ತಿಳಿಸಿದ್ದಾರೆ.
‘ಮೌರ್ಯ ಸಾಮ್ರಾಜ್ಯದ ದೊರೆ ಅಶೋಕ ಚಕ್ರವರ್ತಿಯು ತನ್ನ ಕೊನೆಯ ದಿನಗಳಲ್ಲಿ ಇಲ್ಲಿಗೆ ಭೇಟಿ ನೀಡಿ ಸನ್ನತಿ ಪರಿಸರದಲ್ಲೇ ಕೊನೆಯುಸಿರೆಳೆದ ಎಂಬ ನಂಬಿಕೆ ಇದೆ. ಹೀಗಾಗಿ, ಇಂತಹ ಮಹತ್ವದ ಐತಿಹಾಸಿಕ ತಾಣವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಬೇಕು’ ಎಂದು ಕೇಂದ್ರ ಸಂಸ್ಕೃತಿ ಸಚಿವ ಅರ್ಜುನ ರಾಮ್ ಮೇಘ್ವಾಲ್ ಅವರಿಗೆ ಮನವಿ ಮಾಡಿದ್ದಾರೆ.
ಅಪರೂಪದ ಶಾಸನಗಳು, ಶಿಲ್ಪಗಳು ದೊರಕಿರುವುದರಿಂದ ಅಂತರರಾಷ್ಟ್ರೀಯ ಮಟ್ಟದ ಮ್ಯೂಸಿಯಂ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.