ADVERTISEMENT

ಚಿಂಚೋಳಿಯ ಜನತೆಯ ಭಾಗ್ಯದ ಬಾಗಿಲು ತೆರೆದ ಸಿದ್ಧಸಿರಿ ಸಮೂಹ ಸಂಸ್ಥೆ

ಸಂಸದ ಡಾ. ಉಮೇಶ ಜಾಧವ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:29 IST
Last Updated 28 ಜೂನ್ 2022, 5:29 IST
ಚಿಂಚೋಳಿಯಲ್ಲಿ ಸಿದ್ದಸಿರಿ ಸಮೂಹದ ವಿವಿಧ ಸಂಕಿರ್ಣಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹಾರಕೂಡ ಸಂಸ್ಥಾನ ಹಿರೇಮಠದ ಡಾ.‌ಚನ್ನವೀರ ಶಿವಾಚಾರ್ಯರು ಭೂಮಿಪೂಜೆ ನಡೆಸಿದರು. ಭಗವಂತ ಖೂಬಾ, ಉಮೇಶ ಕತ್ತಿ, ಉಮೇಶ ಜಾಧವ, ಅವಿನಾಶ ಜಾಧವ, ರಾಜಕುಮಾರ ಪಾಟೀಲ ತೆಲ್ಕೂರು, ಬಸನಗೌಡ ಪಾಟೀಲ ಯತ್ನಾಳ ಇದ್ದರು
ಚಿಂಚೋಳಿಯಲ್ಲಿ ಸಿದ್ದಸಿರಿ ಸಮೂಹದ ವಿವಿಧ ಸಂಕಿರ್ಣಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹಾರಕೂಡ ಸಂಸ್ಥಾನ ಹಿರೇಮಠದ ಡಾ.‌ಚನ್ನವೀರ ಶಿವಾಚಾರ್ಯರು ಭೂಮಿಪೂಜೆ ನಡೆಸಿದರು. ಭಗವಂತ ಖೂಬಾ, ಉಮೇಶ ಕತ್ತಿ, ಉಮೇಶ ಜಾಧವ, ಅವಿನಾಶ ಜಾಧವ, ರಾಜಕುಮಾರ ಪಾಟೀಲ ತೆಲ್ಕೂರು, ಬಸನಗೌಡ ಪಾಟೀಲ ಯತ್ನಾಳ ಇದ್ದರು   

ಚಿಂಚೋಳಿ: ಪಟ್ಟಣದಲ್ಲಿ ಸಿದ್ಧಸಿರಿ ಈಥೇನಾಲ್ ಮತ್ತು ವಿದ್ಯುತ್ ಘಟಕದ ಜತೆಗೆ ಪಬ್ಲಿಕ್ ಶಾಲೆ, ಆಸ್ಪತ್ರೆ, ಕಲ್ಯಾಣ ಮಂಟಪ, ಸುಪರ್ ಬಜಾರ, ಕೃಷಿ ಸೇವಾ ಕೇಂದ್ರ ಹಾಗೂ ಗೋಶಾಲೆ, ಪೆಟ್ರೋಲ್ ಪಂಪ್ ಹಾಗೂ ಸಿಎನ್‌ಜಿ ಘಟಕ ಸ್ಥಾಪಿಸುವ ಮೂಲಕ ಚಿಂಚೋಳಿಯ ಭಾಗ್ಯದ ಬಾಗಿಲು ತೆರೆಯಲು ಸಿದ್ಧಸಿರಿ ಸಮೂಹದೊಂದಿಗೆ ಶಾಸಕ ಬಸನಗೌಡಪಾಟೀಲ ಯತ್ನಾಳ್ ಬಂದಿದ್ದಾರೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ತಿಳಿಸಿದರು.

ಅವರು ಸಿದ್ಧಸಿರಿ ಸಮೂಹದ ವಿವಿಧ ಸಂಕೀರ್ಣಗಳ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

3 ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಹಾಗೂ ಕಾನೂನು ತೊಡಕು ಹಾಗೂ ಸಾಲ ನೀಡಿದ ಬ್ಯಾಂಕ್‌ಗಳ ಮನವೊಲಿಸಲು ನಾನು ಇನ್ನಿಲ್ಲದ ಪ್ರಯತ್ನ ಮಾಡಿದ್ದೇನೆ. ಬಸನಗೌಡ ಪಾಟೀಲ ಯತ್ನಾಳ ಸೇರಿ ನೂರಾರು ಉದ್ಯಮಿಗಳು, ಸಕ್ಕರೆ ಕಾರ್ಖಾನೆ ಮಾಲೀಕರನ್ನು, ಸಚಿವರು, ಶಾಸಕರು, ಸಂಸದರು, ರಾಜಕಾರಣಿಗಳನ್ನು ಭೇಟಿ ಮಾಡಿ ಮನವಿ ಮಾಡಿದೆ. ಆದರೆ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ ಕೊನೆಗೆ ಬಸನಗೌಡ ಪಾಟೀಲ ಯತ್ನಾಳ ನಮ್ಮ ಕೈಹಿಡಿದರು ಎಂದರು.

ADVERTISEMENT

ಕೇಂದ್ರ ಸಚಿವ ಭಗವಂತ ಖೂಬಾ, ಅರಣ್ಯ ಸಚಿವ ಉಮೇಶ ಕತ್ತಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ್, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರು ಮಾತನಾಡಿದರು. ಹಾರಕೂಡ ಸಂಸ್ಥಾನ ಹಿರೇಮಠದ ‌ ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಚಿಂಚೋಳಿಯಲ್ಲಿ ₹450 ಕೋಟಿ ಬಂಡವಾಳ ಹೂಡಿ ಇಥೇನಾಲ್ ಮತ್ತು ವಿದ್ಯುತ್ ಘಟಕ ಸ್ಥಾಪಿಸುತ್ತಿದ್ದೇನೆ. ಬರುವ ಆಗಸ್ಟ್ 15ರಿಂದ 30 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ. ಅಕ್ಟೋಬರ್ 5ರಂದು ಇಥೇನಾಲ್ ಘಟಕ ಆರಂಭವಾಗಲಿದೆ. ನೀವು ನಿಶ್ಚಿಂತೆಯಿಂದ ಕಬ್ಬು ಬೆಳೆಯಿರಿ ನಾನು ಖರೀದಿಸುತ್ತೇನೆ ಎಂದು ಅಭಯ ನೀಡಿದರು.

ಜಗದೇವಿ ಗಡಂತಿ, ಶಿವಶರಣಪ್ಪ ಜಾಪಟ್ಟಿ, ಬಸವಣಪ್ಪ ಕುಡಳ್ಳಿ, ಜನಾರ್ದನ ಕುಲಕರ್ಣಿ, ಸಿದ್ರಾಮಪ್ಪ ಪಾಟೀಲ ದಂಗಾಪುರ, ಬಸವರಾಜ ಕೋಡ್ಲಿ, ಶರಣಬಸಪ್ಪ ಭೈರಪ್ಪ, ಸಂತೋಷ ಗಡಂತಿ, ಅಲ್ಲಮಪ್ರಭು ಹುಲಿ, ಸಿದರಾಮಪ್ಪ ಉಪ್ಪಿನ್, ಸಂಗನಬಸಪ್ಪ ಸಜ್ಜನ್, ಸಾಯಿಬಾಬಾ ಸಿಂಧಗೇರಿ, ಜಗದೀಶ ಕ್ಷತ್ರಿ, ಪ್ರಭುಗೌಡ ದೇಸಾಯಿ, ರಾಮನಗೌಡ ಯತ್ನಾಳ, ಗಣಪತಿ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.