ADVERTISEMENT

ಕಲಬುರ್ಗಿಗೆ ವಿಜಯ ಜ್ಯೋತ್ಸ್ನಾ ನೂತನ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 16:54 IST
Last Updated 28 ಆಗಸ್ಟ್ 2020, 16:54 IST
ವಿಜಯ ಜ್ಯೋತ್ಸ್ನಾ
ವಿಜಯ ಜ್ಯೋತ್ಸ್ನಾ   

ಕಲಬುರ್ಗಿ: 2010ನೇ ವೃಂದದ ಐಎಎಸ್‌ ಅಧಿಕಾರಿ ವಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರನ್ನು ಕಲಬುರ್ಗಿ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಶರತ್ ಬಿ. ಅವರನ್ನು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ವಿಜಯ ಜ್ಯೋತ್ಸ್ನಾ ಅವರು ಪ್ರಸ್ತುತ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಯೂ ಕಾರ್ಯನಿರ್ವಹಿಸಿದ್ದರು.

ಜ್ಯೋತ್ಸ್ನಾ ಅವರು ಜಿಲ್ಲಾಧಿಕಾರಿ ಆಗುವುದರೊಂದಿಗೆ ಇಬ್ಬರು ಮಹಿಳೆಯರು ಜಿಲ್ಲೆಯ ಪ್ರಮುಖ ಹುದ್ದೆಗೆ ನೇಮಕವಾದಂತಾಗಿದೆ. ಇತ್ತೀಚೆಗೆ ಡಾ.ಸಿಮಿ ಮರಿಯಮ್ ಜಾರ್ಜ್ ಜಿಲ್ಲೆಯ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ADVERTISEMENT

2019ರ ಆಗಸ್ಟ್‌ನಲ್ಲಿ ಶರತ್ ಬಿ. ಅವರು ಕಲಬುರ್ಗಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಏಪ್ರಿಲ್ 28ರಂದು ಶರತ್ ಅವರನ್ನು ವರ್ಗಾವಣೆಗೊಳಿಸಿ ಕಿಶೋರ ವಿಕಾಸ್ ಸುರಳಕರ್ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದಕ್ಕೆ ಜಿಲ್ಲೆಯ ಜನತೆ ಹಾಗೂ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದ್ದರಿಂದ ಅದೇ ದಿನ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂದೆಗೆದುಕೊಂಡಿತ್ತು.

ಹಲವು ಸವಾಲುಗಳ ಮಧ್ಯೆಯೂ ಶರತ್ ಅವರು ನಗರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ದೇಶದಲ್ಲಿ ಮೊದಲ ಕೊರೊನಾ ಸಾವು ಜಿಲ್ಲೆಯಲ್ಲಿ ಸಂಭವಿಸಿದ ಸಂದರ್ಭದಲ್ಲಿಯೂ ಲಭ್ಯ ವೈದ್ಯರು ಹಾಗೂ ವೈದ್ಯಕೀಯ ಸೌಲಭ್ಯವನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ಶ್ರಮಿಸಿದ್ದರು.

ಕೊರೊನಾ ಕಾರ್ಯಕ್ಕೆ ಸಹಕಾರ ನೀಡದ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವುದಾಗಿ ಪತ್ರ ಬರೆದಿದ್ದಕ್ಕೆ ವೈದ್ಯಕೀಯ ವಲಯದಿಂದ ಟೀಕೆಯೂ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.