ADVERTISEMENT

ಕೊರೊನಾ ವೈರಸ್: ಗಡಿಗ್ರಾಮ ಕುಂಚಾವರಂನಲ್ಲಿ ಅಘೋಷಿತ ಬಂದ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 11:18 IST
Last Updated 20 ಮಾರ್ಚ್ 2020, 11:18 IST
ಚಿಂಚೋಳಿ ತಾಲ್ಲೂಕು ಕುಂಚಾವರಂ ಗ್ರಾಮದಲ್ಲಿ ತಾಂಡೂರು– ಜಹೀರಾಬಾದ ರಸ್ತೆ ಬಿಕೋ ಎನ್ನುತ್ತಿರುವುದು
ಚಿಂಚೋಳಿ ತಾಲ್ಲೂಕು ಕುಂಚಾವರಂ ಗ್ರಾಮದಲ್ಲಿ ತಾಂಡೂರು– ಜಹೀರಾಬಾದ ರಸ್ತೆ ಬಿಕೋ ಎನ್ನುತ್ತಿರುವುದು   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಕೊರೊನಾ ಸೋಂಕು ಹರಡದಂತೆ ಲಗಾಮು ಹಾಕಲು ಸರ್ಕಾರ ಕ್ರಮ ಕೈಗೊಂಡ ಬೆನ್ನಲ್ಲೇ ತಾಲ್ಲೂಕಿನ ಹಳ್ಳಿ ಪಟ್ಟಣಗಳು ಬಂದ್ ಆಚರಿಸಿ ಆಡಳಿತಕ್ಕೆ ಸಹಕರಿಸುತ್ತಿವೆ.

ತೆಲಂಗಾಣ–ಕರ್ನಾಟಕದ ಮಧ್ಯದಲ್ಲಿರುವ ರಾಜ್ಯದ ಪ್ರಮುಖ ಗಡಿಗ್ರಾಮ ಕುಂಚಾವರಂನಲ್ಲಿ ಗುರುವಾರ ಕೊರೊನಾ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮ ಪಂಚಾಯಿತಿಯಿಂದ ಡಂಗುರ ಸಾರಿಸಿದ್ದರಿಂದ ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟು ತೆರೆಯಲಿಲ್ಲ. ಜನರ ಓಡಾಟವೂ ಕ್ಷೀಣವಾಗಿತ್ತು. ಅಲ್ಲಲ್ಲಿ ಅಂಗಡಿಗಳ ಮುಂದೆ ಕೆಲ ವ್ಯಕ್ತಿಗಳು ಅಸಹಾಯಕರಾಗಿ ಕುಳಿತಿದ್ದರು.

ADVERTISEMENT

ಇದರೊಂದಿಗೆ ಚಿಕ್ಕಪುಟ್ಟ ವ್ಯಾಪಾರಿಗಳ ಗೊಣಗಾಟವೂ ಶುರುವಾಗಿದೆ. ಅಯ್ಯೋ ಇನ್ನೆಷ್ಟು ದಿನ ಇದು ನಡೆಯುತ್ತದೆ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

ನಿಷೇಧಾಜ್ಞೆ: ಜಿಲ್ಲಾಧಿಕಾರಿ ಬಿ. ಶರತ್ ಅವರು ಜಿಲ್ಲೆಯಲ್ಲಿ ಮಾ.19ರಿಂದ ಕಲಂ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನಡೆಯದ ಚಿಮ್ಮನಚೋಡ ಸಂತೆ

ಚಿಂಚೋಳಿ: ಕೊರೊನಾ ಹರಡದಂತೆ ತಡೆಯಲು ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ತಾಲ್ಲೂಕಿನ ಚಿಮ್ಮನಚೋಡದಲ್ಲಿ ನಡೆಯಬೇಕಿದ್ದ ವಾರದ ಸಂತೆ ಗುರುವಾರ ನಡೆಯದೇ ರಸ್ತೆಗಳು ಬಿಕೊ ಎನ್ನುತ್ತಿದ್ದವು.

ಎರಡು ದಿನಗಳ ಹಿಂದೇಯೇ ಸೂಚನೆ ನೀಡಿದ್ದರಿಂದ ವಾರದ ಸಂತೆಯ ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ವಸ್ತುಗಳ ಖರೀದಿಗಾಗಿ ಚಿಮ್ಮನಚೋಡ ಅವಲಂಬಿಸಿದ್ದ ಜನರಿಗೆ ತೊಂದರೆಯಾಯಿತು.

ಕೆಲವರು ತರಕಾರಿ ಮಾರಾಟ ಮಾಡಲು ಮುಂದಾದಾಗ ಜನಸಂದಣಿ ಉಂಟಾಗುವುದನ್ನು ತಡೆಯಲು ಪೊಲೀಸರು ಅವರಿಗೂ ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.