ಕಲಬುರಗಿ: ‘ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳ ಜೊತೆಗೆ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಎನ್ಎಸ್ಎಸ್ ಅಗತ್ಯ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಎನ್.ಜಿ.ಕಣ್ಣೂರು ಹೇಳಿದರು.
ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸಲು, ಅವರ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್ಎಸ್ಎಸ್ ಚಟುವಟಿಕೆಗಳು ಸಹಕಾರಿ. ಪ್ರತಿಯೊಬ್ಬ ಎನ್ಎಸ್ಎಸ್ ಶಿಬಿರಾರ್ಥಿಗಳು ಶಿಬಿರದ ಅನುಭವ ಪಡೆಯಬೇಕು’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಮೊರ್ಗೆ ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಸೀರ್ಅಲಿ, ಜಗನ್ನಾಥ ಪಟ್ಟಣಕರ, ಪ್ರೊ.ಶರಣಪ್ಪ ಸೈದಾಪುರ, ಪ್ರೊ.ಬಿ.ಎಸ್.ಬಿರಾದರ, ಪ್ರೊ.ಮಹಾದೇವ ಬಡಿಗೇರ, ಕಾಲೇಜಿನ ಎನ್ಎಸ್ಎಸ್ ‘ಎ’ ಘಟಕದ ಅಧಿಕಾರಿ ಸಂತೋಷ ಹುಂಪ್ಲಿ ಹಾಗೂ ಎನ್ಎಸ್ಎಸ್ ‘ಬಿ’ ಘಟಕದ ಅಧಿಕಾರಿ ಮೀನಾಕ್ಷಿ ವಿಜಯಕುಮಾರ್, ಪ್ರೊ.ಗೀತಾ ರಾಣಿ, ಪ್ರೊ.ರೂಪಾಲಿ, ಪ್ರೊ.ಚಂದ್ರಶೇಖರ್, ನಾಗರಾಜ ಪೂಜಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.