
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಆರ್ಜೆ ಸ್ವತಂತ್ರ ಪದವಿಪೂರ್ವ ವಿಜ್ಞಾನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇಲ್ಲಿನ ತಿಮ್ಮಾಪುರಿ ಲೇಔಟ್ನ ದೊಡ್ಡಪ್ಪ ಅಪ್ಪಾ ನಗರದಲ್ಲಿ ಆಯೋಜಿಸಲಾಗಿತ್ತು.
‘ನಶಾ ಮುಕ್ತ ಭಾರತ ಅಭಿಯಾನ’ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಆರಂಭವಾಯಿತು. ಬೆಳಿಗ್ಗೆ 9 ಗಂಟೆಯಿಂದ ಎನ್ಎಸ್ಎಸ್ ಶಿಬಿರಾರ್ಥಿಗಳು ದೊಡ್ಡಪ್ಪ ಅಪ್ಪಾ ಬಡಾವಣೆಯ ರಸ್ತೆಯನ್ನು ಸ್ವಚ್ಛಗೊಳಿಸಿದರು.
ಎನ್ಎಸ್ಎಸ್ ವಿಭಾಗೀಯ ಅಧಿಕಾರಿ ಚಂದ್ರಶೇಖರ ದೊಡ್ಡಮನಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ‘ಗಾಂಧಿ ಜಯಂತಿಯ ಶತಮಾನೋತ್ಸವದಂದು (1969ರ ಸೆ.24) ಎನ್ಎಸ್ಎಸ್ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂಸ್ಥೆ ಕೇಂದ್ರ ಸರ್ಕಾರದ ಪ್ರತಿ ಘಟಕದಲ್ಲಿ ನೂರು ಸ್ವಯಂ ಸೇವಕರಿದ್ದು, ವಾರದ ಏಳು ದಿನ ರಾಷ್ಟ್ರಮುಖಿಯಾಗಿ, ಸಮಾಜಮುಖಿಯಾಗಿ, ಗ್ರಾಮಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 4,75,000 ಸ್ವಯಂ ಸೇವಕರಿದ್ದಾರೆ. ಪದವಿ ಪೂರ್ವ ಕಾಲೇಜಿನಲ್ಲಿ 75000 ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಭುರ್ಲಿ ಪ್ರಹ್ಲಾದ ಮಾತನಾಡಿ, ‘ವಿದ್ಯಾರ್ಥಿಗಳು ಪಾಲಕರನ್ನು ಖುಷಿಯಾಗಿಡಬೇಕು. ಆರೋಗ್ಯದ ಕಾಳಜಿ ವಹಿಸಿ ದಿನನಿತ್ಯ ಯೋಗ, ಧ್ಯಾನ, ಅಭ್ಯಾಸ ಮಾಡುತ್ತಾ ಜೆಇಇ, ನೀಟ್, ಕೆ–ಸಿಇಟಿಗಳಲ್ಲಿ ಹೆಚ್ಚಿನ ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತರಬೇಕು’ ಎಂದು ಸಲಹೆ ನೀಡಿದರು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರಕಾಶ ಚವ್ಹಾಣ, ಉಪಪ್ರಾಚಾರ್ಯ ಕೇದಾರ ದೀಕ್ಷಿತ, ಉಪನ್ಯಾಸಕರಾದ ಪ್ರಕಾಶ ಕಾಂತೀಕಾರ, ಶಾಂತೇಶ ಹುಂಡೇಕಾರ್, ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಎನ್ಎಸ್ಎಸ್ ಗೀತೆ ಹಾಡಿದರು. ಮಾನಸಾ ದೇಶಪಾಂಡೆ, ಸಂಜನಾ ಮತ್ತು ವೃಂದಾ ಪ್ರಾರ್ಥಿಸಿದರು. ಮಳೇಂದ್ರ ಹಿರೇಮಠ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.