ADVERTISEMENT

ಕಲಬುರ್ಗಿ: ವಿ.ವಿ.ಗೆ ಹೊಸ ಕಳೆ ತಂದ ಯಕ್ಷ, ಯಕ್ಷಿಯರು

ನಾಲ್ಕು ದಿನಗಳ ಎನ್‌ಎಸ್‌ಎಸ್‌ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 4:18 IST
Last Updated 9 ಜನವರಿ 2021, 4:18 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎನ್‌ಎಸ್‌ಎಸ್‌ ಯುವಜನೋತ್ಸವದ ಅಂಗವಾಗಿ ನಡೆದ ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿ ಗುರುರಾಜ ಹೊಸಕೋಟೆ, ಚಂದ್ರಕಾಂತ ಯಾತನೂರ, ಪ್ರೊ.ಸಂಜೀವಕುಮಾರ ಕೆ.ಎಂ, ಪ್ರೊ.ರಮೇಶ ಲಂಡನಕರ್, ಪೂರ್ಣಿಮಾ ಜೋಗಿ ಭಾಗವಹಿಸಿದ್ದರು
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಎನ್‌ಎಸ್‌ಎಸ್‌ ಯುವಜನೋತ್ಸವದ ಅಂಗವಾಗಿ ನಡೆದ ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿ ಗುರುರಾಜ ಹೊಸಕೋಟೆ, ಚಂದ್ರಕಾಂತ ಯಾತನೂರ, ಪ್ರೊ.ಸಂಜೀವಕುಮಾರ ಕೆ.ಎಂ, ಪ್ರೊ.ರಮೇಶ ಲಂಡನಕರ್, ಪೂರ್ಣಿಮಾ ಜೋಗಿ ಭಾಗವಹಿಸಿದ್ದರು   

ಕಲಬುರ್ಗಿ: ಭಾರಿ ಗಾತ್ರದ ಡೊಳ್ಳು ಹೊತ್ತು ಬಾರಿಸುತ್ತಲೇ ಕುಣಿಯುವ ಹಮ್ಮೀರರು, ಕರಾವಳಿ, ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅಡುಗೆ ಎಲೆಯ ಟೋಪಿ ಹಾಕಿದ್ದ ತರುಣಿಯರು, ಯಕ್ಷಗಾನ, ಹುಲಿ ವೇಷದ ಮೂಲಕ ತುಳು ಸಂಸ್ಕೃತಿಯನ್ನು ಕಲ್ಯಾಣ ನಾಡಿನಲ್ಲಿ ಬಿಂಬಿಸಲು ಬಂದ ಯುವಕ, ಯುವತಿಯರು, ಅಕ್ಕಮಹಾದೇವಿಯ ವೇಷ ಧರಿಸಿ ಗಮನ ಸೆಳೆದ ಯುವತಿ...

–ಹೀಗೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಯಕ್ಷ–ಯಕ್ಷಿಯರು ಹೊಸ ಕಿನ್ನರ ಲೋಕವನ್ನೇ ಸೃಷ್ಟಿಸಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ರಾಜ್ಯ ಎನ್‌ಎಸ್ಎಸ್ ಕೋಶ, ಗುಲಬರ್ಗಾ ವಿ.ವಿ.ಯ ಎನ್‌ಎಸ್‌ಎಸ್‌ ಕೋಶದಿಂದ ಆಯೋಜಿಸಿರುವ ನಾಲ್ಕು ದಿನಗಳ ರಾಜ್ಯಮಟ್ಟದ ಯುವಜನೋತ್ಸವಕ್ಕೂ ಮುನ್ನ ನಡೆದ ಮೆರವಣಿಗೆಯಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಿದರು.

ADVERTISEMENT

ವಿ.ವಿ. ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಎನ್‌ಎಸ್‌ಎಸ್‌ ಸ್ವಯಂ ಸೇವಕರೊಂದಿಗೆ ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟೆ, ವಿ.ವಿ. ಹಂಗಾಮಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ, ಪ್ರಭಾರ ಕುಲಸಚಿವ (ಆಡಳಿತ), ಮೌಲ್ಯಮಾಪನ ಕುಲಸಚಿವ ಪ್ರೊ. ಸಂಜೀವಕುಮಾರ ಕೆ.ಎಂ., ಎನ್‌ಎಸ್‌ಎಸ್‌ ಅನುಷ್ಠಾನ ಅಧಿಕಾರಿ ಪೂರ್ಣಿಮಾ ಜೋಗಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ವಿ.ವಿ. ಕಾರ್ಯಸೌಧದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಗುರುರಾಜ ಹೊಸಕೋಟೆ, ‘ಉತ್ಸವಗಳು, ಆಟಗಳ ಮುಖೇನ ನಮ್ಮನ್ನು ನಾವು ಪುನರ್ ಸ್ಥಾಪಿಸಿಕೊಳ್ಳಬೇಕು. ಸುಳ್ಳು ಮತ್ತು ಅಸತ್ಯಗಳು ಆರಂಭಿಕ ಹಂತದಲ್ಲಿ ವಿಜೃಂಭಿಸಿದರೂ, ಅಂತಿಮವಾಗಿ ಸತ್ಯ ಮತ್ತು ನ್ಯಾಯಕ್ಕೆ, ಒಳ್ಳೆತನಕ್ಕೆ ಗೆಲುವು ಇದೆ. ಅದಕ್ಕಾಗಿ ಸುಳ್ಳು, ಅನ್ಯಾಯ, ಕೆಡುಕಿನ ಹಾದಿ ಹಿಡಿಯದೇ ಸತ್ಯದ ದಾರಿಯಲ್ಲಿ ಬದುಕಿನ ಅನ್ವೇಷಣೆ ಮಾಡಬೇಕು’ ಎಂದರು.

ನಂತರ ‘ಶ್ರೀಕ್ಷೇತ್ರ ಮಾಡಾಕ ಹೊರಟೀವಿ...’, ‘ಮಗಾ ಹುಟ್ಯಾಯನವ್ವ ನನಗೊಬ್ಬ ಮಗಾ ಹುಟ್ಯಾನವ್ವ..’ ಮತ್ತು ‘ದುಡ್ಡು ಕೊಟ್ಟರೆ ಬೇಕಾದ್ದು ಸಿಗತೈತಿ ಈ ಜಗದಗ ಕಾಣೋ, ಹಡದ ತಾಯಿನ ಕಳಕೊಂಡು ಬಿಟ್ಟರೆ ಮತ್ತೆ ಸಿಗುವಳೇನೊ’ ಹಾಡುಗಳನ್ನು ಹಾಡಿ ರಂಜಿಸಿದರು.

ಡಾ.ಪೂರ್ಣಿಮಾ ಜೋಗಿ ಮಾತನಾಡಿ, ‘ತ್ಯಾಗ, ಸೇವೆಗಳು ಎರಡು ಪ್ರಮುಖ ಮೌಲ್ಯಗಳು. ತ್ಯಾಗವೆಂದರೆ ಸೈನಿಕರು ನೆನಪಾದರೆ ಸೇವೆ ಎಂದರೆ ಎನ್‌ಎಸ್‌ಎಸ್‌ ನೆನಪಾಗುತ್ತದೆ. ಇವುಗಳನ್ನು ಮುಂದಿನ ತಲೆಮಾರಿಗೆ ನಾವು ಉಡುಗೊರೆ ನೀಡಬೇಕು’ ಎಂದರು.

ಎನ್‌ಎಸ್‌ಎಸ್‌ ಸಂಯೋಜಕ ಪ್ರೊ. ರಮೇಶ ಲಂಡನಕರ್ ಮಾತನಾಡಿ, ರಾಜ್ಯದ 52 ವಿಶ್ವವಿದ್ಯಾಲಯದ ಸ್ವಯಂಸೇವಕರು ಯುವಜನೋತ್ಸವದಲ್ಲಿ ಭಾಗವಹಿಸಬೇಕಿತ್ತು. ಕೋವಿಡ್ ಕಾರಣದಿಂದ ಕೆಲ ವಿ.ವಿ.ಯವರು ಬಂದಿಲ್ಲ. ಬೆಂಗಳೂರು ವಿ.ವಿ. ಬೆಂಗಳೂರು ಕೇಂದ್ರ ವಿ.ವಿ. ಶಿವಮೊಗ್ಗದ ಕುವೆಂಪು ವಿ.ವಿ., ಧಾರವಾಡದ ಕರ್ನಾಟಕ ವಿ.ವಿ, ಮಂಗಳೂರು ವಿ.ವಿ., ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ. ಸೇರಿದಂತೆ 20ಕ್ಕೂ ಅಧಿಕ ವಿ.ವಿ.ಯಿಂದ 80 ಸ್ಪರ್ಧಿಗಳು ಭಾಗವಹಿಸಿದ್ದಾರೆ. ನಾಲ್ಕು ದಿನಗಳವರೆಗೆ ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.