ADVERTISEMENT

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಮತ್ತೊಬ್ಬ ಆರೋಪಿ ಎನ್.ವಿ. ಸುನೀಲ ಕುಮಾರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 10:44 IST
Last Updated 26 ಏಪ್ರಿಲ್ 2022, 10:44 IST
ಎನ್.ವಿ.ಸುನೀಲಕುಮಾರ ಅವರನ್ನು ಮಂಗಳವಾರ ಕಲಬುರಗಿಗೆ ಕರೆತಂದ ಸಿಐಡಿ ಅಧಿಕಾರಿಗಳ ತಂಡ
ಎನ್.ವಿ.ಸುನೀಲಕುಮಾರ ಅವರನ್ನು ಮಂಗಳವಾರ ಕಲಬುರಗಿಗೆ ಕರೆತಂದ ಸಿಐಡಿ ಅಧಿಕಾರಿಗಳ ತಂಡ   

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ನಿವಾಸಿ ಎನ್.ವಿ.ಸುನೀಲ ಕುಮಾರ ಬಂಧಿತ. ಇಲ್ಲಿನ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಸುನೀಲ ಕುಮಾರ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣ ಬಳಸಿ ಪಾಸಾದ ಆರೋಪ ಇವರ ಮೇಲಿದೆ.

ಹಗರಣದಲ್ಲಿ ಈಗಾಗಲೇ ಬಂಧಿತರಾದ ರುದ್ರಗೌಡ ಡಿ. ಪಾಟೀಲ ಮುಖಾಂತರವೇ ಸುನೀಲಕುಮಾರ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳ ಮರುಪರಿಶೀಲನೆಗೆ ಹಾಜರಾಗಲು ಸುನೀಲಕುಮಾರಗೆ ಬುಲಾವ್ ಬಂದಿತ್ತು. ಸೋಮವಾರ ಬೆಂಗಳೂರಿನ ಸಿಐಡಿ ಕಚೇರಿಗೆ ತೆರಳಿದ್ದರು. ಪರಿಶೀಲನೆ ವೇಳೆ ಅಕ್ರಮ ನಡೆದ ಸಂದೇಹ ಬಂದಿದ್ದು, ಆರೋಪಿಯನ್ನು ಅಧಿಕಾರಿಗಳು ಸ್ಥಳದಲ್ಲೇ ವಶಕ್ಕೆ ಪಡೆದರು.

ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ಅವರನ್ನು ಕಲಬುರಗಿಗೆ ಕರೆತಂದಿತು.

ಆರೋಪಿಯು ರುದ್ರಗೌಡ ಡಿ. ಪಾಟೀಲಗೆ ₹ 40 ಲಕ್ಷ ಹಣ ನೀಡಿದ್ದ ಎಂಬ ಸಂಶಯ ಇದ್ದು, ವಿಚಾರಣೆ ನಡೆದಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.