ಕಲಬುರ್ಗಿ: ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೂನ್ 22ರಂದುವಾಸ್ತವ್ಯ ಮಾಡಲಿದ್ದು,ಸಿದ್ಧತೆ ಭರದಿಂದ ಸಾಗಿರುವುದರಿಂದ ಕೆಲಮಕ್ಕಳು ಸುಡುವ ಬಿಸಿಲಲ್ಲೇಕಲಿಯಬೇಕಾಗಿದೆ!
ಈ ಶಾಲೆಯ ಕೊಠಡಿಯೊಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಸಲಾಗುತ್ತಿದೆ. ಹೀಗಾಗಿ, ಈ ಕೊಠಡಿಯಲ್ಲಿ ಪಾಠ ಕೇಳಿಸಿಕೊಳ್ಳಬೇಕಿದ್ದ 20ಕ್ಕೂ ಅಧಿಕ ಮಕ್ಕಳನ್ನು ಬುಧವಾರ ಶಾಲೆಯ ಹೊರಗೆ ಬಿಸಿಲಲ್ಲಿ ಕೂರಿಸಿ ಪಾಠ ಮಾಡಲಾಯಿತು. ಇನ್ನೊಂದು ಕೊಠಡಿಯಲ್ಲಿ ಸಿಮೆಂಟ್ ಚೀಲಗಳನ್ನು ಇಟ್ಟಿದ್ದು,ಕೊಠಡಿಯ ತುಂಬಾ ತುಂಬಿಕೊಂಡಿದ್ದ ದೂಳಿನಲ್ಲೇಮಕ್ಕಳು ಶಿಕ್ಷಕರಿಂದ ಪಾಠ ಕೇಳಿಸಿಕೊಂಡರು.
ಸಿದ್ಧತೆ ಪರಿಶೀಲಿಸಲು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಕಚೇರಿ ಅಧಿಕಾರಿಬಿ.ಎನ್.ಕೃಷ್ಣಯ್ಯ, ‘ಕುಮಾರಸ್ವಾಮಿ ಅವರು ಉಳಿದುಕೊಳ್ಳುವ ಕೊಠಡಿಗೆ ಬಣ್ಣ ಬಳಿಯದೇ ಅದು ಹೇಗಿದೆಯೋ ಹಾಗೇ ಉಳಿಸಿಕೊಳ್ಳಿ’ ಎಂದುಸೂಚಿಸಿದ್ದರು.ಆದರೆ, ಆ ಕೊಠಡಿಗೂ ಬಣ್ಣ ಹಚ್ಚಲಾಗಿದೆ.
ಇಲ್ಲಿಯ ವಿದ್ಯಾರ್ಥಿಗಳುಈ ವರೆಗೆನೆಲದ ಮೇಲೆ ಕುಳಿತೇ ಪಾಠ ಕೇಳುತ್ತಿದ್ದರು. 100 ಹೊಸ ಬೆಂಚ್ಗಳನ್ನು ತರಿಸಿ ಅಳವಡಿಸಲಾಗಿದೆ. ಶಾಲೆಯ ಗೋಡೆಗಳನ್ನುನಲಿಕಲಿ ಪಠ್ಯದ ಪರಿಕರಗಳಿಂದ ಅಲಂಕರಿಸಲಾಗುತ್ತಿದ್ದು, ಆವರಣಗೋಡೆ ನಿರ್ಮಿಸಲಾಗುತ್ತಿದೆ.
ನಾಲ್ಕು ಹೊಸ ಶೌಚಾಲಯ
₹3.50 ಲಕ್ಷ ವೆಚ್ಚದಲ್ಲಿ ನಾಲ್ಕು ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಲಾಗುತ್ತಿದೆ.ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಜನಪ್ರತಿನಿಧಿಗಳ ಬಳಕೆಗೆ ಎರಡು ಶೌಚಾಲಯ ನಿರ್ಮಿಸಲಾಗುತ್ತಿದೆ.ಮುಖ್ಯಮಂತ್ರಿ ಅವರು ವಾಸ್ತವ್ಯ ಮಾಡಲಿರುವ ಮೂರನೇ ತರಗತಿಯ ಕೊಠಡಿಗೆ ಹೊಂದಿಕೊಂಡಂತೆ ಎರಡು ಶೌಚಾಲಯ ಹಾಗೂ ಸ್ನಾನಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಗುರುವಾರ ಕಾಮಗಾರಿ ಪೂರ್ಣಗೊಳ್ಳಲಿದೆ.
‘ಸಿಮೆಂಟ್ ಚೀಲಗಳನ್ನು ಕೊಠಡಿಯಲ್ಲಿ ಇಟ್ಟಿದ್ದರಿಂದಮಕ್ಕಳಿಗೆ ಕೊಂಚ ತೊಂದರೆಯಾಯಿತು. ಸಂಜೆಯೇ ಚೀಲಗಳನ್ನು ತೆರವುಗೊಳಿಸಲಾಯಿತು. ಶಾಲೆಗೆ ಮೂಲಸೌಲಭ್ಯ ಕಲ್ಪಿಸಲು ₹ 13.67 ಲಕ್ಷ ವೆಚ್ಚ ಮಾಡಲಾಗುತ್ತಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಹೊನ್ನಳ್ಳಿ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.