ಚಿಂಚೋಳಿ: ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ಅವ್ಯವಹಾರ ಎಸಗಿದ ಆರೋಪದ ಮೇಲೆ ತಾಲ್ಲೂಕಿನ ಚಿಮ್ಮಾಇದಲಾಯಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಬಂಡಪ್ಪ ಧನ್ನಿ ಅವರನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ರಾಜಾ ಅವರು ಅಮಾನತುಗೊಳಿಸಿ ಗುರುವಾರ ಆದೇಶಿಸಿದ್ದಾರೆ.
ಜಿ.ಪಂ. ಸದಸ್ಯ ಸಂಜೀವನ ಯಾಕಾಪುರ ಅವರು ಚಿಮ್ಮಾಈದಲಾಯಿ ಗ್ರಾ.ಪಂ.ಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ ಆಗಿರುವ ಕುರಿತು ಏ.20ರಂದು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದರು.
ಜಿ.ಪಂ. ಉಪ ಕಾರ್ಯದರ್ಶಿಗಳು ತನಿಖೆ ನಡೆಸಿ ಮೇ 21ರಂದು ವರದಿ ಸಲ್ಲಿಸಿದ್ದರು. ಬಂಡಪ್ಪ ಧನ್ನಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಆಡಳಿತ ಶಾಖೆಗೆ ಟಿಪ್ಪಣಿ ಸಲ್ಲಿಸಿದ್ದನ್ನು ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜತೆಗೆ ಅವ್ಯವಹಾರದ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಸೇವೆ ಒದಗಿಸಿದ್ದ ಇಬ್ಬರು ತಾಂತ್ರಿಕ ಸಹಾಯಕರನ್ನು ವಾಪಸ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.