ADVERTISEMENT

ಶಾಂತಿ ಕದಡಲು ಸೌಹಾರ್ದ ಪ್ರಿಯರು ಅವಕಾಶ ನೀಡಲ್ಲ: ಎನ್.ಕೆ.ಶಾಫಿ ಸಆದಿ

​ಪ್ರಜಾವಾಣಿ ವಾರ್ತೆ
Published 29 ಮೇ 2022, 8:40 IST
Last Updated 29 ಮೇ 2022, 8:40 IST
ಎನ್.ಕೆ.ಶಾಫಿ ಸಆದಿ
ಎನ್.ಕೆ.ಶಾಫಿ ಸಆದಿ   

ಕಲಬುರಗಿ: ‘ಮಸೀದಿಗಳಲ್ಲಿ ದೇವಾಲಯದ ಕುರುಹುಗಳಿವೆ ಎಂದು ಹೇಳಿ ಕೆಲವರು ವಿವಾದ ಎಬ್ಬಿಸಲು ಪ್ರಯತ್ನಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಶಾಂತಿ ಕದಡಲು ರಾಜ್ಯದ ಸೌಹಾರ್ದ ಪ್ರಿಯ ಜನರು ಅವಕಾಶ ನೀಡುವುದಿಲ್ಲ ಎಂಬ ನಂಬಿಕೆಯಿದೆ’ ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಅಧ್ಯಕ್ಷ ಎನ್.ಕೆ.ಶಾಫಿ ಸಆದಿ ತಿಳಿಸಿದರು.

‘ಶತಮಾನಗಳಿಂದ ಹಿಂದೂ, ಮುಸ್ಲಿಮರು ಸೇರಿದಂತೆ ವಿವಿಧ ಜಾತಿ, ಧರ್ಮದವರು ಒಂದಾಗಿ ಬಾಳುತ್ತಿದ್ದಾರೆ. ಶರಣ, ಸೂಫಿ ಸಂಸ್ಕೃತಿ ಪರಂಪರೆಯಿದೆ. ಮಸೀದಿ ಮತ್ತು ದರ್ಗಾಗಳಲ್ಲಿ ದೇವಾಲಯ, ಮಠಗಳ ಸಂಕೇತ ಮತ್ತು ದೇವಾಲಯಗಳಲ್ಲಿ ಮಸೀದಿಗಳ ಕುರುಹುಗಳಿವೆ. ಇದು ಭಾವೈಕ್ಯದ ಪರಂಪರೆ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸರ್ವ ಜನಾಂಗಗಳ ಶಾಂತಿ ಬಯಸಿದ ಬಸವಣ್ಣ, ಕುವೆಂಪು ಅವರು ಜನಿಸಿದ ನೆಲದಲ್ಲಿ ಕೋಮುವಾದದ ಹೆಸರಿನಲ್ಲಿ ಅಪಾಯಕಾರಿ ಬೆಳವಣಿಗೆ ಆಗುವುದನ್ನು ಜನರು ತಡೆಯುತ್ತಾರೆ. ಶಾಂತಿ, ಸೌಹಾರ್ದತೆಗಾಗಿ ಈಗಾಗಲೇ ವಿವಿಧ ಮಠಾಧೀಶರು, ಸ್ವಾಮೀಜಿಗಳ ಜೊತೆ ಚರ್ಚಿಸಿದ್ದು, ಸಭೆಗಳನ್ನು ಕೂಡ ನಡೆಸಲಾಗಿದೆ’ ಎಂದು ಅವರು ತಿಳಿಸಿದರು.‌‌

ADVERTISEMENT

‘ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸ್ವಾಮೀಜಿಗಳಿಗೆ ಮತ್ತು ಮಠಾಧೀಶರಿಗೂ ಬೇಸರವಿದೆ. ಕ್ರಿಯೆ ಮತ್ತು ಪ್ರತಿಕ್ರಿಯೆಯಿಂದ ಕೆಡಕು ಹೆಚ್ಚಾಗುವುದೇ ಹೊರತು ಒಳಿತು ಆಗುವುದಿಲ್ಲ. ಜಾತಿ–ಧರ್ಮದ ಹೆಸರಿನಲ್ಲಿ ಕಲಹಕ್ಕೆ ಅವಕಾಶ ನೀಡುವ ಬದಲು ಎಲ್ಲರೂ ಜೊತೆಯಾಗಿ ಬಾಂಧವ್ಯದಿಂದ ಬಾಳಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.