ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ)ದಲ್ಲಿ ತಮಿಳು ವಿದ್ಯಾರ್ಥಿಗಳು ಮಂಗಳವಾರ ಪೊಂಗಲ್ ಆಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸುಗ್ಗಿಯ ಉತ್ಸವದ ಸಾಂಸ್ಕೃತಿಕ ಪರಂಪರೆ ಮತ್ತು ಮಹತ್ವವನ್ನು ಎತ್ತಿ ತೋರಿಸುವ ಈ ಸಂಭ್ರಮ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಿತು.
ಸಾಂಪ್ರದಾಯಿಕ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವೈವಿಧ್ಯಮಯ ರಂಗೋಲಿ ಹಾಕಲಾಗಿತ್ತು. ಎಲ್ಲ ತಮಿಳು ವಿದ್ಯಾರ್ಥಿಗಳು ಹಬ್ಬವನ್ನು ಸಂಕೇತಿಸುವ ರೋಮಾಂಚಕ ಕುಮಿ ನೃತ್ಯ ಪ್ರದರ್ಶಿಸಿದರು. ಸಿಲಂಬಮ್, ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ನಡೆದವು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪೊಂಗಲ್ ಭಾರತದಾದ್ಯಂತ ಸುಗ್ಗಿಯ ಹಬ್ಬಗಳ ಮಹತ್ವವನ್ನು ಒತ್ತಿಹೇಳುತ್ತದೆ. ಇದು ರಾಷ್ಟ್ರದ ಆರ್ಥಿಕತೆ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳ ಬೆನ್ನೆಲುಬಾಗಿ ಕೃಷಿಯ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ದಿನವು ಉತ್ತರಾಯಣ ಅಂದರೆ ಸೂರ್ಯನ ಉತ್ತರಾಭಿಮುಖ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ’ ಎಂದು ಹೇಳಿದರು.
ವಿದ್ಯಾರ್ಥಿ ಸಂಯೋಜಕರಾದ ಮೆರಿಕ್ ಮತ್ತು ಜೆರ್ಲಿನ್ ಪೊಂಗಲ್ ಮಹತ್ವದ ಕುರಿತು ವಿವರಿಸಿದರು.
ವಿತ್ತಾಧಿಕಾರಿ ರಾಮಾದೊರೈ, ಪ್ರೊ. ವೆಂಕಟರಮಣ ದೊಡ್ಡಿ, ನಲ್ಲ ಬಾಬು ಹಾಗೂ ಇತರ ಪ್ರಾಧ್ಯಾಪಕರು ಹಾಜರಿದ್ದರು. ಜಯವೇಲ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.