ADVERTISEMENT

ಕಲಬುರ್ಗಿ: ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ 60 ಕಲಾತಂಡ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 13:02 IST
Last Updated 3 ಫೆಬ್ರುವರಿ 2020, 13:02 IST
85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆಗೆ ಕಲಾವಿದರು ಭಾನುವಾರ ಅಂತಿಮ ಸ್ಪರ್ಶ ನೀಡಿದರು
85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯವೇದಿಕೆಗೆ ಕಲಾವಿದರು ಭಾನುವಾರ ಅಂತಿಮ ಸ್ಪರ್ಶ ನೀಡಿದರು   

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ 5ರಿಂದ 7ರವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ ಭವ್ಯ ಮೆರವಣಿಗೆಯ ಉದ್ಘಾಟನಾ ಸಮಾರಂಭ ಫೆ 5ರಂದು ಬೆಳಿಗ್ಗೆ 8.30ಕ್ಕೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ನಗರದ ಡಾ. ಎಸ್.ಎಂ.ಪಂಡಿತ ರಂಗಮಂದಿರದಿಂದ ಆರಂಭಗೊಂಡ ಈ ಮೆರವಣಿಗೆಯು ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ಬಲಕ್ಕೆ ತಿರುಗಿ ರಿಂಗ್ ರಸ್ತೆ ಮೂಲಕ ಕುಸನೂರ ರಸ್ತೆಯ ಮಾರ್ಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ಪ್ರಧಾನ ವೇದಿಕೆಗೆ ಬಂದು ತಲುಪಲಿದೆ.

ಸಮ್ಮೇಳನದ ಸ್ವಾಗತ ಸಮಿತಿ ಸಂಚಾಲಕರೂ ಆದ ಜಿಲ್ಲಾಧಿಕಾರಿ ಶರತ್ ಬಿ. ಸಮ್ಮೇಳಾಧ್ಯಕ್ಷರ ಮೆರವಣಿಗೆ ಉದ್ಘಾಟಿಸುವರು.

ADVERTISEMENT

ಪೊಲೀಸ್ ಕಮಿಷನರ್‌ ಡಾ.ಎಂ.ಎನ್.ನಾಗರಾಜ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ರಾಜಾ ಪಿ, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಡಿ. ಕಿಶೋರ ಬಾಬು, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್.ಷಡಕ್ಷರಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೆಂಗಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಡಾ.ಶರಣಪ್ರಕಾಶ ಪಾಟೀಲ,ಬಾಬುರಾವ್ ಚವ್ಹಾಣ, ಮಾಜಿ ಶಾಸಕ ಜಿ.ರಾಮಕೃಷ್ಣ, ವಿಧಾನ ಪರಿಷತ್ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ, ಮಾಜಿ ಸಚಿವರಾದ ಸುನೀಲ ವಲ್ಯಾಪುರೆ, ರೇವೂನಾಯಕ ಬೆಳಮಗಿ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ, ವಿಶ್ವನಾಥ ಪಾಟೀಲ ಹೆಬ್ಬಾಳ, ಮಾಜಿ ವಿಧಾನ ಪರಿಷತ್ ಶಾಸಕರಾದ ಅಮರನಾಥ ಪಾಟೀಲ, ಶಶಿಲ್ ಜಿ.ನಮೋಶಿ, ಮಾರುತಿರಾವ್ ಮಾಲೆ ಅವರು ಅತಿಥಿಗಳಾಗಿ ಭಾಗವಹಿಸುವರು.

ಮೆರವಣಿಗೆಯಲ್ಲಿ ಕಲಬುರ್ಗಿ ಜಿಲ್ಲೆಯ 23 ಕಲಾ ತಂಡಗಳು ಸೇರಿ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರ, ಚಿತ್ರದುರ್ಗ, ತುಮಕೂರ, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ರಾಯಚೂರು, ಶಿವಮೊಗ್ಗ, ಹಾಸನ, ಆಂಧ್ರ ಗಡಿನಾಡು
ಘಟಕ, ಹಾಸನ, ಉಡುಪಿ ಸೇರಿ ವಿವಿಧ ಜಿಲ್ಲೆಗಳ ಒಟ್ಟು 60 ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ಈ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಡೊಳ್ಳು ಕುಣಿತ, ಹಲಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಕುಣಿತ ಮತ್ತು ಚರ್ಮವಾದ್ಯ, ಲಂಬಾಣಿ ಕುಣಿತ, ಪುರವಂತಿಕೆ ಕುಣಿತ, ಹೆಜ್ಜೆಮೇಳ, ರಣ ಹಲಗೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ವಲಯ ಮಾದೇಶ್ವರ ಬೀಸು ಕಂಸಾಳೆ, ವೀರಗಾಸೆ ಕುಣಿತ, ಕೊಂಬು ಕಹಳೆ, ಸಂಬಳ ವಾಧ್ಯ, ಮೋಜಿನ ಕುಣಿತ ಸಮರ ಕಲೆ, ಕತ್ತಿ ವರಸೆ, ದಾಲಿಪಟ ಸಾಧನ, ಮುಳ್ಳಿನ ಚಕ್ರ, ವೀರಭದ್ರನ ಕುಣಿತ, ನಗಾರಿ, ಜಾನಪದ ನೃತ್ಯ, ಕಿಲು ಕುಣಿತ, ಗಾರುಡಿ ಗೊಂಬೆ, ಹಗಲು ವೇಷಧಾರಿ ಕುಣಿತ, ಸಮಾಳ ಮತ್ತು ನಂದಿಕೋಲು, ಝಾಂಚ್ ಪಥಕ, ಸೋಮನ ಕುಣಿತ, ಗೋರವರ ಕುಣಿತ, ತಮಟೆ ಬೇಸ್ ಡ್ರಮ್, ಬೆಟ್ಟಮೇಳ ಕಲೆ, ನಾಸಿಕ ಡೋಲ, ಯಕ್ಷಗಾನ ಸೇರಿ ವಿವಿಧ ತಂಡಗಳು ಭಾಗವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.